ಗದಗ: 2 ತಿಂಗಳು ರಜೆಗೆಂದು ಊರಿಗೆ ಬಂದಿದ್ದ ಸೈನಿಕರೊಬ್ಬರು ಇನ್ನೊಂದು ವಾರದಲ್ಲಿ ಕರ್ತವ್ಯಕ್ಕೆ ವಾಪಾಸ್ ಹೋಗುವ ಮುನ್ನವೇ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬೆಳ್ಳೆರಿನಲ್ಲಿ ನಡೆದಿದೆ.
ಮಹಾಂತೇಶ್ ಮೇಟಿ(25) ಆತ್ಮಹತ್ಯೆಗೆ ಶರಣಾದ ಸೈನಿಕ. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಾಂತೇಶ್ ಅವರು 2005ರಲ್ಲಿ ಭಾರತೀಯ ಸೇನೆಗೆ ಭರ್ತಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಿಕ್ಕಿಂನ 228 ಬಟಾಲಿಯನ್ನಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಬಾರಿ ಮದುವೆ ಮಾಡಿಕೊಳ್ಳೋದಕ್ಕೆ ಎರಡು ತಿಂಗಳು ರಜೆ ಹಾಕಿಕೊಂಡು ಮಹಾಂತೇಶ್ ಊರಿಗೆ ಬಂದಿದ್ದರು. ಆದರೆ ಬುಧವಾರ ಜಮೀನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 15 ದಿನಗಳ ಹಿಂದೆಯಷ್ಟೇ ಇವರ ಮದುವೆ ನಿಶ್ಚಿತಾರ್ಥ ಕೂಡಾ ಮಾಡಲಾಗಿತ್ತು. ಮುಂದಿನ ರಜೆಗೆ ಬಂದಾಗ ಮದುವೆ ಆದರಾಯಿತು ಅಂತ ಇನ್ನೊಂದು ವಾರದ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗುವುದಾಗಿ ಮಹಾಂತೇಶ್ ಎಲ್ಲರ ಬಳಿ ಹೇಳಿದ್ದರು. ಊರಿಗೆ ಬಂದರೆ ಸಾಕು ರೈತನಾಗಿ ತಂದೆ-ತಾಯಿ ಜೊತೆಗೂಡಿ ಕೆಲಸ ಮಾಡ್ತಿದ್ದರು. ಊರಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚು ಮೆಚ್ಚು.
ಆದರೆ ಏಕಾಏಕಿ ಜಮೀನಿನಲ್ಲಿ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಇತ್ತ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.