ಗದಗ: ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರಿನ ಗರ್ಭಿಣಿ ರೋಗಿ-607ರ ಪ್ರಕರಣದ ನಂಟು ಗದಗ ಜಿಲ್ಲೆಗೂ ಹಬ್ಬಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮ ಗರ್ಭಿಣಿಯ ತವರೂರು ಆದ್ದರಿಂದ ಏಪ್ರಿಲ್ 29ರಂದು ಅವರು ತವರೂರಿಗೆ ಬಂದಿದ್ದರು. ಕೃಷ್ಣಾಪುರದಲ್ಲಿ ಗರ್ಭಿಣಿ ಜೊತೆಗೆ ಪ್ರಥಮ ಸಂಪರ್ಕದಲ್ಲಿದ್ದ 19 ಜನರ ಪೈಕಿ ಈಗಾಗಲೆ 15 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನು ಉಳಿದ 4 ಜನರ ವರದಿಗಳಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಜೊತೆಗೆ ದ್ವಿತೀಯ ಸಂಪರ್ಕದಲ್ಲಿದ್ದ 33 ಜನರ ವರದಿಗಳು ಸಹ ನೆಗೆಟಿವ್ ಎಂದು ಬಂದಿದೆ. ಇದನ್ನೂ ಓದಿ: ಸೋಂಕಿತ ಗರ್ಭಿಣಿಯಿಂದ 12 ಮಂದಿಗೆ ಕೊರೊನಾ – ಗ್ರಾಮದ 128 ಮಂದಿ ಕ್ವಾರಂಟೈನ್
ಗರ್ಭಿಣಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗುವ ಮೊದಲು ರೋಣ ಪಟ್ಟಣದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಈ ಎರಡೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನ ಕ್ವಾರಂಟೈನ್ ಮಾಡಲಾಗಿದೆ. ಅವರ ವರದಿಯೂ ನೆಗೆಟಿವ್ ಎಂದು ಬಂದಿವೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಗರ್ಭಿಣಿ ಜೊತೆಗೆ ಸಂಪರ್ಕದಲ್ಲಿದ್ದ 12 ಜನರ ವರದಿ ಪಾಸಿಟಿವ್ ಬಂದಿವೆ. ಇದನ್ನೂ ಓದಿ: ಕೊರೊನಾ ಸೋಂಕಿತೆ ಗರ್ಭಿಣಿ ಪತಿಯಿಂದ ಗ್ರಾಮದ ಮನೆ ಮನೆಗೆ ತೆರಳಿ ಕಜ್ಜಾಯ ಭಿಕ್ಷೆ
ಈ ಹಿನ್ನೆಲೆ ಕೃಷ್ಣಾಪುರದಲ್ಲೂ ಗರ್ಭಿಣಿ ಜೊತೆ ಪ್ರಥಮ ಸಂಪರ್ಕದಲ್ಲಿದ್ದ ಜನರ ವರದಿಗಳು ಮತ್ತೊಮ್ಮೆ ತಪಾಸಣೆಗೆ ಕಳುಹಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೃಷ್ಣಾಪುರ ಗ್ರಾಮವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಿದ್ದು, ಗ್ರಾಮದ ಜನರಲ್ಲಿ ಮಾತ್ರ ಆತಂಕ ಹೆಚ್ಚಿಸಿದೆ.