ಗದಗ: ನಗರದ (Gadag) ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯೊಬ್ಬ ಸ್ಥಳ ಮಹಜರಿಗೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸ್ಥಳ ಮಹಜರಿಗೆ ತೆರಳಿದ್ದ ವೇಳೆ ಎ-2 ಆರೋಪಿ ಫೈರೋಜ್ ಶಲವಡಿ-ನರಗುಂದ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪ ಹೇಳಿ ಜೀಪ್ ನಿಲ್ಲಿಸಲು ಹೇಳಿದ್ದಾನೆ. ಬಳಿಕ ಕೆಳಗಿಳಿದು ಸ್ಥಳದಲ್ಲಿದ್ದ ಬಾಟಲ್ ಒಂದನ್ನು ತೆಗೆದುಕೊಂಡು ಪಿಎಸ್ಐ ಶಿವಾನಂದ ಪಾಟೀಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲಿಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ನರಗುಂದ ಬಳಿ ಮೊಬೈಲ್ ಎಸೆದು ಹೋಗಿದ್ದ. ಈ ಸಂಬಂಧ ಪೊಲೀಸರು ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಈ ಘಟನೆ ನಡೆದಿದೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಮಗನಿಂದಲೇ ಸುಪಾರಿ
ಏನಿದು ಪ್ರಕರಣ?: ಏ.19 ರಂದು ದಾಸರ ಓಣಿಯಲ್ಲಿ ದುಷ್ಕರ್ಮಿಗಳು, ಬಿಜೆಪಿ ನಾಯಕಿ, ಗದಗ, ಬೆಟಗೇರಿ ನಗರಸಭೆ ಉಪಾಧ್ಯಕ್ಷೆ (Bettagere Municipal Vice President) ಸುನಂದಾ ಬಾಕಳೆಯವರ (Sunanda Bakale) ಮನೆಗೆ ನುಗ್ಗಿ ನಾಲ್ವರ ಹತ್ಯೆ ಮಾಡಿದ್ದರು. ತನಿಖೆ ವೇಳೆ ಕುಟುಂಬವನ್ನು ಮುಗಿಸಲು ಅದೇ ಕುಟುಂಬದ ಪ್ರಕಾಶ್ ಬಾಕಳೆ ಮಗ ವಿನಾಯಕ ಎಂಬಾತ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿತ್ತು.
ಮನೆಗೆ ನುಗ್ಗಿದ್ದ ಹಂತಕರು ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆಮಾಡಿದ್ದರು. ಕೊಲೆಯಾದ ದಿನ ಸ್ಥಳದಲ್ಲಿಯೇ ಆರೋಪಿ ವಿನಾಯಕ ಇದ್ದ. ಅಲ್ಲದೇ ಆತನೇ ಪೊಲೀಸರಿಗೆ ಖುದ್ದಾಗಿ ಮಾಹಿತಿ ಕೊಟ್ಟದ್ದ. ಈ ವೇಳೆ ತನಗೆ ಏನು ಗೊತ್ತಿಲ್ಲದಂತೆ ವರ್ತಿಸಿದ್ದ.
ಆರೋಪಿ ವಿನಾಯಕ ಪ್ರಕಾಶ್ ಬಾಕಳೆ ಮೊದಲ ಹೆಂಡತಿ ಮಗನಾಗಿದ್ದು, ಆಸ್ತಿ ವಿಚಾರದ ವೈಷಮ್ಯದಿಂದ ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್ಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿತ್ತು.
ಈ ಸಂಬಂಧ ಆರೊಪಿಗಳಾದ ವಿನಾಯಕ ಫೈರೋಜ್ ಖಾಜಿ, ಜಿಶಾನ್ ಖಾಜಿ, ಸಾಹಿಲ್ ಖಾಜಿ, ಸೊಹೇಲ್ ಖಾಲಿ, ಸುಲ್ತಾನ್ ಶೇಖ್, ಮಹೇಶ್ ಸಾಳೊಂಕೆ, ವಾಹಿದ್ ಬೇಪಾರಿ ಎಂಬವರನ್ನು ಬಂಧಿಸಿದ್ದರು. ಇದನ್ನೂ ಓದಿ: ಗದಗ ಬಿಜೆಪಿ ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಬರ್ಬರ ಹತ್ಯೆ – ಮಲಗಿದ್ದಲ್ಲೇ ಕೊಲೆಗೈದು ದುಷ್ಕರ್ಮಿಗಳು ಪರಾರಿ