ಗದಗ: ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮ, ಮಂದಿರ ಮಸೀದಿಗಳ ವಿಚಾರವಾಗಿ ಗಲಾಟೆ, ಗಲಭೆ ನಡೆಯುತ್ತಿದ್ದು, ಸಮಾಜ ಸ್ವಾಸ್ತತೆ ಹಾಳಾಗುತ್ತಿದೆ. ಅದನ್ನು ತಪ್ಪಿಸಿ ಕೋಮು ಸೌಹಾರ್ದತೆ ಸಾರಲು ಗದಗ ಮುಸ್ಲಿಂ ಬಾಂಧವರು ಅಯ್ಯಪ್ಪಸ್ವಾಮಿ ಮೊರೆಹೊಗಿದ್ದಾರೆ.
ಈಶ್ವರ ಅಲ್ಲಾ ತೆರೆನಾಮ್ ಸಬ್ಕೊ ಸನ್ಮತಿ ದೇ ಭಗವಾನ್ ಎಂಬಮಾತು ಅಲ್ಲಿ ನಿಜಕ್ಕೂ ಸಾಬೀತು ಮಾಡಿದ್ದಾರೆ. ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಪೂಜೆ ನೆರವೇರಿಸುವ ಮೂಲಕ ಗದಗ ಜಿಲ್ಲೆಯ ಹೆಸರು ಮತ್ತಷ್ಟು ಉತ್ತುಂಗಕ್ಕೆರುವಂತೆ ಮಾಡಿದ್ದಾರೆ.
ನಗರದ ಖಾನ್ತೋಟದ ಇಮಾಮ್ ಖಾಸಿಮ್ ಪಂಜದ್ ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ ನೆರವೇರಿತು. ಇಮಾಮ್ ಸೆಂಟ್ರಿಂಗ್ ಪ್ಲೇಟ್ಸ್ ಸಂಘ ಹಾಗೂ ಮಸೀದಿ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ನೇತೃತ್ವದಲ್ಲಿ ಕೋಮು ಸೌಹಾರ್ದತೆ ಮಹಾಪೂಜೆ ನಡೆಯಿತು. ಮಸೀದಿಯಲ್ಲಿ ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆರವೇರಿತು. ಮುಸ್ಲಿಂ ಬಾಂಧವರು ಅಯ್ಯಪ್ಪನಿಗೆ ಭಕ್ತಿಯಿಂದ ಆರತಿ ಬೆಳಗಿ ಪಾರ್ಥಿಸಿದರು.
ಧರ್ಮ-ಧರ್ಮಗಳ, ಜಾಯಿ-ಜಾತಿಗಳ ನಡುವೆ ಯುದ್ಧ ಸೃಷ್ಟಿಸಲು ಹೊರಟವರಿಗೆ, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವವರಿಗೆ ಸಾಮರಸ್ಯದ ನೀತಿಪಾಠ ಹೇಳುತ್ತಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತರು ಒಂದೆ. ಎಲ್ಲರೂ ಒಂದಾಗಿ ಬಾಳೋಣ ಎಂಬ ಭಾವನೆಯಿಂದ ಕೋಮು ಸೌಹಾರ್ದತೆಯಿಂದ ಬಾಳಲು ಕಳೆದ ಎರಡು ವರ್ಷದಿಂದ ಅಯ್ಯಪ್ಪಸ್ವಾಮಿ ಪೂಜೆ ನಡೆಸುತ್ತ ಬಂದಿದ್ದೇವೆ ಎಂದು ದರ್ಗಾದ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ತಿಳಿಸಿದ್ದಾರೆ.
ನಗರದ ಗಂಗಾಪೂರಪೇಟೆ ದುರ್ಗಾದೇವಿ ಸನ್ನಿದಾನದಿಂದ ಪಂಜದ್ ದರ್ಗಾವರೆಗೆ ಅಯ್ಯಪ್ಪನ ಮೂರ್ತಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಮೋಹರಂ ಹಬ್ಬದ ವೇಳೆ ಮೊಲಾಲಿ ದೇವರು ಕೂಡವ ಜಾಗೆಯಲ್ಲಿ ಅಯ್ಯಪ್ಪ, ಗಣೇಶ ಹಾಗೂ ಷಣ್ಮುಖ ದೇವರ ಮಂಟಪಮಾಡಿ ಪೂಜೆ ನಡೆಸಿದರು. ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಮುಸ್ಲಿಂ ಬಾಂಧವರೇ ತಂದು, ಹತ್ತಾರು ಗುರುಸ್ವಾಮಿಗಳು, ನೂರಾರು ಮಾಲಾಧಾರಿಗಳನ್ನು ಕರೆಯಿಸಿ ಪೂಜೆ ಸಲ್ಲಿಸಿದರು.
ಮಸೀದಿಯಲ್ಲಿ ಪೂಜೆ ಮಾಡಿದ ಅಯ್ಯಪ್ಪನಿಗೆ ಕರ್ಪೂರ ಹಚ್ಚಿ, ಆರತಿ ಬೆಳಗಿ, ಶರಣ ಕೂಗುತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಜಲಾಭಿಷೇಕ, ಪಂಚಾಮೃತ, ಕುಂಕುಮಾರ್ಚನೆ, ಎಳೆನೀರು, ತುಪ್ಪದಭಿಷೇಕ, ಬಿಲ್ವಾರ್ಚಣೆ, ಹೂ ಮೂಲಕ ಮಹಾಪೂಜೆ ಸಲ್ಲಿಸಿ ಎಲ್ಲರೂ ಭಕ್ತಿಗೆ ಪಾತ್ರರಾದರು. ಹಾಗೆ ಇಮಾಮ್ ಖಾಸಿಂ ಪಂಜದ ದರ್ಗಾಗೂ ಪೂಜೆ ನೈವೇದ್ಯ ನಡೆಯಿತು. ನಂತರ ಅನ್ನ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜನರಲ್ಲಿ ಧಾರ್ಮಿಕ ಭಾವನೆಗಳು ಬದಲಾಗಬೇಕೆಂಬ ದೃಷ್ಟಿಯಿಂದ ಈ ಪೂಜೆ ಹಮ್ಮಿಕೊಂಡಿರುವುದು ಸ್ಥಳೀಯರಿಗೂ ಖುಷಿ ತಂದಿದೆ.