ಗದಗ: ಉತ್ತರ ಕರ್ನಾಟಕದ ಸೈಹಾದ್ರಿ, ಆಯುರ್ವೇದ ಔಷಧಿಯ ಸಸ್ಯಕಾಶಿ, ದೇಶದಲ್ಲಿಯೇ ಶುದ್ಧ ಗಾಳಿಗೆ ಹೆಸರಾದ ಜಿಲ್ಲೆಯ ಕಪ್ಪತಗುಡ್ಡದಲ್ಲಿ (Kappata Gudda) ಬೆಂಕಿ ಕಾಣಿಸಿಕೊಂಡಿದೆ.
ಬೇಸಿಗೆ ಆರಂಭಕ್ಕೂ ಮುನ್ನ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಬೆಂಕಿಗಾಹುತಿ (Fire) ಆಗುತ್ತಿದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದೆ. ಡೋಣಿ ಬಳಿಯ ನಂದಿವೇರಿ ಮಠದ ಹಿಂಭಾಗ, ಬಂಗಾರಕೊಳ್ಳ, ದೊಡ್ಡ ಬಂಗಾರಕೊಳ್ಳ, ಉಪ್ಪಾರ ತಟ್ಟು, ನವಣೆ ರಾಶಿ, ಎತ್ತಿನಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಪ್ರದೇಶ ಸುಟ್ಟು ಹೋಗಿದೆ.
Advertisement
ಬೆಂಕಿಯಿಂದ ಸರೀಸೃಪಗಳು, ವನ್ಯಜೀವಿಗಳು, ಔಷಧೀಯ ಸಸ್ಯಗಳು, ಪ್ರಾಣಿ, ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಆರ್ಎಫ್ಒ ಮಂಜುನಾಥ ಮೆಗಲಮನಿ ನೇತೃತ್ವದಲ್ಲಿ ಅನೇಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.
Advertisement
Advertisement
ಜೀವದ ಹಂಗು ತೊರೆದು ಬುಧವಾರ ಸಂಜೆಯಿಂದ ಇಂದು ಬೆಳಗಿನ ಜಾವದ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಸಿರು ಸಂಪತ್ತು ರಕ್ಷಣೆಗಾಗಿ ಕಪ್ಪತ್ತಗುಡ್ಡದಲ್ಲಿ ಈಗ ಸುಮಾರು 70 ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
Advertisement
ಹಸಿರು ಕಾಶಿಗೆ ಮೊದಲು ಗಣಿ ಹಾಗೂ ಭೂಗಳ್ಳರಿಂದ ಕಪ್ಪತ್ತಗುಡ್ಡಕ್ಕೆ ಆಪತ್ತು ಬಂದಿತ್ತು. ಈಗ ಬೆಂಕಿ ಆಪತ್ತು ಬಂದೊದಗಿದೆ. ಯಾರೋ ಕೊಡಿಗೇಡಿಗಳ ಕೃತ್ಯದಿಂದ ಕಪ್ಪತ್ತಗುಡ್ಡ ಬೆಂಕಿ ಕೆನ್ನಾಲಿಗೆಗೆ ನಲುಗಿದೆ. ಗುಡ್ಡದಲ್ಲಿರುವ ವಿಂಡ್ ಫ್ಯಾನ್ ನಿಂದ ಆಗಿರಬಹುದಾ? ಕುರಿಗಾಹಿಗಳ ಕೃತ್ಯನಾ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.