– ಪವಾಡ ರೀತಿ ಬದುಕುಳಿದ ಬಾಲಕ, ಬೈಕ್ ಸವಾರ
– ಸವಾರನ ಕೈ ಮೇಲೆ ಹರಿದ ಟಿಪ್ಪರ್
ಗದಗ: ಬೈಕ್ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ನಲ್ಲಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ರತ್ನಾ ಮಹೇಂದ್ರಕರ್ (14) ಮೃತ ದುರ್ದೈವಿ. ಬೈಕ್ ಸವಾರ ಫಕ್ಕೀರಯ್ಯ ಹಿರೇಮಠ ಹಾಗೂ ಸಚಿನ್ (2) ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಕೆಲಸದ ನಿಮಿತ್ತ ಫಕ್ಕೀರಯ್ಯ ಹಿರೇಮಠ ಅವರು ಲಕ್ಷ್ಮೇಶ್ವರಕ್ಕೆ ಬಂದಿದ್ದರು. ಅವರೊಂದಿಗೆ ಅದೇ ಗ್ರಾಮದ ರತ್ನಾ ಹಾಗೂ ಸಚಿನ್ ಕೂಡ ಬಂದಿದ್ದರು. ಕೆಲಸ ಮುಗಿಸಿಕೊಂಡು ಶಿಗ್ಲಿಗೆ ಮರಳುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಚಾಲನ ನಿಯಂತ್ರಣ ತಪ್ಪಿ ಬೈಕ್ ಬಿದ್ದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರತ್ನಾ ಟಿಪ್ಪರ್ ಹಿಂಬದಿಯ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ.
ಅದೃಷ್ಟವಶಾತ್ ಫಕ್ಕೀರಯ್ಯ ಹಾಗೂ ಬಾಲಕ ಸಚಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಫಕ್ಕೀರಯ್ಯ ಅವರ ಕೈ ಮೇಲೆ ಟಿಪ್ಪರ್ ಹರಿದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಟಿಪ್ಪರ್ ಚಾಲಕನ ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಘಟನೆ ನಡೆದ ಕೂಡಲೆ ಚಾಲಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಟಿಪ್ಪರ್ ಚಾಲಕನಿಗೆ ಪೊಲೀಸರು ಬಲೆ ಬಿಸಿದ್ದಾರೆ.