ಗದಗ: ಬಸ್ ಸೌಲಭ್ಯ ಇಲ್ಲದ್ದರಿಂದ ಸಿವಿಲ್ ಪೊಲೀಸ್ ಪರೀಕ್ಷೆ ಬರೆಯಲು ಕಲಬುರಗಿಗೆ ಹೊರಟಿದ್ದ 40 ಅಭ್ಯರ್ಥಿಗಳ ಕನಸಿಗೆ ತಣ್ಣೀರೆರಚಿದಂತಿದೆ.
ಅಭ್ಯರ್ಥಿಗಳು ಸಿವಿಲ್ ಪೊಲೀಸ್ ಪರೀಕ್ಷೆ ಬರೆಯಲು ಗದಗದಿಂದ ಕಲಬುರಗಿಗೆ ಹೊರಟ್ಟಿದ್ದರು. ಈ ವೇಳೆ ಪರೀಕ್ಷಾರ್ಥಿಗಳು ಹೆಚ್ಚುವರಿ ಬಸ್ ಒದಗಿಸುವಂತೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಲಿಲ್ಲ.
ಕೆ.ಎಸ್.ಆರ್.ಟಿ.ಸಿ ಅವರು ಮಾಡಿದ ಎಡವಟ್ಟಿನಿಂದ ಪೊಲೀಸ್ ಆಗುವ ಕನಸು ಕಂಡ 40 ಪರೀಕ್ಷಾರ್ಥಿಗಳ ಕನಸು ಕನಸಾಗಿಯೇ ಉಳಿದಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಗದಗದಿಂದ ಯಾದಗಿರಿಗೆ ಹೊರಟಿದ್ದ ರಾಜಹಂಸ ಬಸ್ಸನ್ನು ತಡೆದು ಗದಗ ಹೊಸ ಬಸ್ ನಿಲ್ದಾಣದ ಮ್ಯಾನೇಜರ್ ಅನ್ನು ತರಾಟೆ ತೆಗೆದುಕೊಂಡಿದ್ದಾರೆ. ಅದರೂ ಬಸ್ ಬಿಡದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಡೋಂಟ್ ಕೇರ್ ಎಂದಿದ್ದಾರೆ.
ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಬೆಟಗೇರಿ ಬಡಾವಣೆ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆ ಮಾಡಿ ಅಲ್ಲಿಂದ ಕಳುಹಿಸಿ ಕೊಟ್ಟಿದ್ದಾರೆ.