ಗದಗ: ಪ್ರವಾಹ ಬಂದು ಮುಗಿದು ಹೋದ ಮೇಲೆ ಇನ್ನೂ ಯಾವುದೇ ಅನುದಾನ ಪ್ರಕಟಿಸಿದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಎಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ಜನರ ಸಂಕಷ್ಟಕ್ಕೆ ಸಹಾಯ ಮಾಡದಿರೋದು ದುರ್ದೈವ ಸ್ಥಿತಿ. ಇದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕಿತ್ತು. ಭಾರೀ ಪ್ರಮಾಣದ ಪ್ರವಾಹವಾದರೂ ಕೇಂದ್ರ ಸರ್ಕಾರ ನಯಾಪೈಸೆ ನೀಡದೇ ತೆಪ್ಪಗಿರೋದು ಅತ್ಯಂತ ದುರ್ದೈವ ಪ್ರಸಂಗ ಎಂದು ಆಕ್ರೋಶ ಹೊರ ಹಾಕಿದರು.
2009 ರಲ್ಲಿ ನೆರೆ ಬಂದಾಗ ಮನಮೋಹನ್ ಸಿಂಗ್ ಅವರು 1600 ಕೋಟಿ ರೂ. ನೀಡಿದ್ದರು. ಆದರೆ ಈ ಭಾರಿ ಪ್ರವಾಹ ಬಂದು ತಿಂಗಳ ಮೇಲಾಯಿತು. ಕವಡೆಕಾಸಿನ ಹಣ ಮೋದಿ ನೀಡಿಲ್ಲ. ಇದೆನಾ ಮೋದಿ ಜನರಿಗೆ ಕೊಡುವ ಗೌರವ? ಇದೆನಾ ಜನರ ನೋವು, ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಒಯ್ಯದೇ ಲೋಪ ಮಾಡಿದ್ದಾರೆ. ಕೂಡಲೇ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ ಎಂದು ಹೆಚ್.ಕೆ ಪಾಟೀಲ್ ಸಿಎಂಗೆ ಒತ್ತಾಯಮಾಡಿದರು.