ಕೊಪ್ಪಳ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರ ಬಟ್ಲರ್ ಇಂಗ್ಲಿಷ್ ವಿಚಾರದ ಹಿನ್ನೆಲೆಯಲ್ಲಿ ಜಿ.ಟಿ.ಡಿ ಅವರು ಇಂಗ್ಲಿಷ್ ಮಾತನಾಡುವ ಅವಶ್ಯಕತೆ ಇಲ್ಲ. ಕನ್ನಡದಲ್ಲೇ ಮಾತನಾಡಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೆಗೌಡ ಅವರಿಗೆ ಇಂಗ್ಲಿಷ್ ಬರಲ್ಲಾ ಅನ್ನೋ ಮಾತು ಕೇಳಿ ನನಗೆ ಬಹಳ ಬೇಜಾರಾಗಿದೆ. ನಾವೇನು ಇಂಗ್ಲಿಷ್ ಗುಲಾಮರಾ. ಜಿ.ಟಿ. ದೇವೇಗೌಡರು ಇಂಗ್ಲಿಷ್ ನಲ್ಲಿ ಮಾತನಾಡಕೂಡದು. ಅವರು ಕನ್ನಡದಲ್ಲೇ ಮಾತನಾಡಲಿ ಅಂತ ರಾಯರೆಡ್ಡಿ ತಿಳಿಸಿದ್ದಾರೆ.
ಕನ್ನಡ ಮಾತಾಡಿದರೆ ಕೀಳರಿಮೆ, ಇಂಗ್ಲಿಷ್ ಮಾತಡಿದ್ರೆ ಸುಪರೀಯರಾ. ನನಗೆ ಬಹಳ ಕೋಪ ಇದೆ. ನಾನು ಜಿ.ಟಿ.ದೇವೆಗೌಡರಿಗೆ ಫುಲ್ ಸಪೋರ್ಟ್ ಮಾಡ್ತೀನಿ. ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯ, ಭಾಷೆ ಮುಖ್ಯ ಅಲ್ಲ. ಸಂವಿಧಾನತ್ಮಕವಾಗಿ ಜಿಟಿಡಿ ಸರಿ ಇದ್ದಾರೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಮಂತ್ರಿ ಮುಖ್ಯಮಂತ್ರಿ ಆಗಲು ಅವಕಾಶವಿದೆ. ವಿದೇಶಿಗರು ಬಂದ್ರೂ ಸಚಿವರು ಕನ್ನಡದಲ್ಲೇ ಮಾತನಾಡಲಿ. ಮಧ್ಯೆ ಭಾಷಾ ತರ್ಜುಮೆ ಮಾಡುವರನ್ನು ಇಟ್ಟುಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.
ಕಾನೂನು ಪ್ರಕಾರ ಸರ್ಕಾರವನ್ನು ಯಾರೂ ಏನೂ ಮಾಡೋಕೆ ಆಗಲ್ಲ. ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಎರಡೂವರೆ ವರ್ಷ ಏನೂ ಆಗಲ್ಲ. ಕಾಂಗ್ರೆಸ್ ಪಕ್ಷವೇ ಬೆಂಬಲ ವಾಪಸ್ ತಗೆದುಕೊಳ್ಳಬೇಕು. ಕಾಂಗ್ರೆಸ್ ಗೆ ಅನಿವಾರ್ಯತೆ ಇದೆ. ಕುಮಾರಸ್ವಾಮಿಗೆ ಏನಾಗಬೇಕಿದೆ. ಎರಡು ವರ್ಷ ಆದ ಬಳಿಕ ಕೆಲವರ ಮನೋಭಾವ ಬದಲಾಗಬಹುದು ಎಂದ ರಾಯರೆಡ್ಡಿ ಹೇಳಿದ್ದಾರೆ.