ಮೈಸೂರು: ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಜಿ.ಟಿ. ದೇವೇಗೌಡ ಅವರು ಹುಣಸೂರು ಉಪ ಚುನಾವಣೆಯಲ್ಲಿ ತಟಸ್ಥ ನಿಲುವು ಪ್ರಕಟಿಸಿದ್ದರು. ಈಗ ಮೈಸೂರು ಮಹಾ ನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವು ಪ್ರಕಟಿಸಿದ್ದಾರೆ. ತಾವು ತಟಸ್ಥ ನಿಲುವು ಪ್ರಕಟಿಸುವುದಕ್ಕೆ ಇಂದು ಮೈಸೂರಿನಲ್ಲಿ ಕಾರಣ ಕೂಡ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮೌನದ ರಹಸ್ಯ ಬಿಚ್ಚಿಟ್ಟರು. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಹೇಳುವ ಮೂಲಕ ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವಿಗೆ ಜಿಟಿಡಿ ಸ್ಪಷ್ಟಿಕರಣ ನೀಡಿದರು.
ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ ಎಂದು ಮಾರ್ಮಿಕವಾಗಿ ಹೇಳಿದರು.