ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Elctions 2024) ನಮ್ಮ ನಿರೀಕ್ಷೆಯಷ್ಟು ಸ್ಥಾನ ಗಳಿಸದೇ ಲೆಕ್ಕ ತಪ್ಪಿದ್ದೇವೆ ಎಂದು ಡಾ.ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಡಾ.ಜಿ.ಪರಮೇಶ್ವರ್ (G Parameshwar), ಬಿಜೆಪಿಗೂ ಬಹುಮತ ಬಂದಿಲ್ಲ. ಮೋದಿಯವರ ಪರವೂ ಜನಮನ್ನಣೆ ಸಿಕ್ಕಿಲ್ಲ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ಕನಿಷ್ಟ 20 ಸ್ಥಾನ ಬರುವ ನಿರೀಕ್ಷೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿದೆ, ಆದರೂ ಒಂದರಿಂದ ಒಂಭತ್ತು ಸ್ಥಾನ ಗೆದ್ದಿದ್ದೇವೆ. ಫಲಿತಾಂಶ ಸಮಾಧಾನ ತಂದಿದೆ, ಆದ್ರೆ ಸಂತೋಷ ತಂದಿಲ್ಲ ಅಂದ್ರು.
ಇಡೀ ಎಕ್ಸಿಟ್ ಪೋಲ್ ಒನ್ ಸೈಡ್ ಆಗಿ ಬಿಂಬಿಸಲಾಗಿತ್ತು. ಎಕ್ಸಿಟ್ ಪೋಲ್ ಫಲಿತಾಂಶ ಬಂದ ನಂತರ ಸುಳ್ಳಾಯ್ತು. ಇಂಡಿಯಾ ಒಕ್ಕೂಟ ಅತೀ ಹೆಚ್ಚು ಸೀಟುಗಳನ್ನು ಗೆದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇನ್ನೂ ಗಟ್ಟಿಯಾಗಿದೆ ಅಂತ ಫಲಿತಾಂಶ ತೋರಿಸಿದೆ. ಇನ್ನು ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದ ಜನ ನಮಗೂ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಗ್ಯಾರಂಟಿಗಳಿಂದ ಜನ ಸಮಾಧಾನ ಆಗಿಲ್ಲ ಅನ್ಸತ್ತೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ತೇವೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ನಿರೀಕ್ಷೆ ಏರುಪೇರಾಗಿದೆ. ಸ್ವಲ್ಪ ಪ್ರಯತ್ನ ಮಾಡಿದ್ರೆ ಇನ್ನೂ ನಾಲ್ಕು ಸ್ಥಾನ ಬರಬಹುದಿತ್ತು. ನಮ್ಮ ಲೆಕ್ಕಾಚಾರವೂ ತುಮಕೂರಲ್ಲಿ ಕೈಹಿಡಿಯಲಿಲ್ಲ. ಮುದ್ದಹನುಮೇಗೌಡ ಗೆಲ್ತಾರೆ ಅನ್ಕೊಂಡಿದ್ದೆವು. ಆದ್ರೆ ಗೆಲ್ಲಲಿಲ್ಲ, ಲೆಕ್ಕಾಚಾರ ಏರುಪೇರಾಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.
2019 ರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಕ್ಸಸ್ ಆಗಿರಲಿಲ್ಲ. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಅವರಿಗೆ ಕೈಹಿಡಿದಿದೆ. ಇವತ್ತಿಗೂ ಕೇಂದ್ರದಲ್ಲಿ ಇಂಡಿಯಾ ಕೂಟ ಸರ್ಕಾರ ಮಾಡುವ ಅವಕಾಶ ಇದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮನಸು ಮಾಡಿ ಇಂಡಿಯಾ ಕೂಟಕ್ಕೆ ಬೆಂಬಲಿಸಿದರೆ ಸಾಧ್ಯವಿದೆ ಎಂದು ಹೇಳಿದರು.
ಸಿಬಿಐ ಪತ್ರ ಬರೆದರೆ ವಾಲ್ಮಿಕಿ ಅಕ್ರಮ ಪ್ರಕರಣ ವಹಿಸ್ತೇವೆ: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಆಗಿರುವ ಬಗ್ಗೆ ಮಾತಾಡಿದ ಪರಮೇಶ್ವರ್, ಸಿಬಿಐನವರಿಗೆ ಯೂನಿಯನ್ ಬ್ಯಾಂಕಿನವರು ಪತ್ರ ಬರೆದಿದ್ರು. ಮೂರು ಕೋಟಿಗೂ ಹೆಚ್ಚು ಅಕ್ರಮ ಆಗಿದ್ರೆ ಸಿಬಿಐ ಸೂಮೋಟೋ ದೂರು ದಾಖಲು ಮಾಡಬಹುದು. ಬ್ಯಾಂಕ್ ನವರು ಪತ್ರ ಬರೆದಿದ್ದರು. ಈಗ ಸಿಬಿಐನವರು ತನಿಖೆ ಮಾಡ್ತಾರೆ.
ನಾವು ಸಿಬಿಐನವ್ರಿಗೆ ತನಿಖೆ ವಹಿಸಬೇಕಾಗುತ್ತದೆ. ಅದಕ್ಕೂ ಮೊದಲು ಸಿಬಿಐ ನವ್ರು ನಮಗೆ ಪತ್ರ ಬರೆಯಬೇಕು. ಸರ್ಕಾರ ಕೇಸ್ ಸಿಬಿಐಗೆ ವಹಿಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ತಗೋಬೇಕಾಗುತ್ತೆ. ಈಗ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಡೆಸಲು ಆಗಲ್ಲ. ಮೊದಲು ಸಿಬಿಐನವರು ಪತ್ರ ಬರೆಯಲಿ, ಆಮೇಲೆ ನೋಡ್ತೇವೆ. ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ. ಸಿಬಿಐನವರು ಅಗತ್ಯ ಬಿದ್ದರೆ ಸಚಿವ ನಾಗೇಂದ್ರರಿಗೂ ವಿಚಾರಣೆಗೆ ನೊಟೀಸ್ ಕೊಡಬಹುದು. ಸಿಬಿಐ ನಿಯಮದಂತೆ ತನಿಖೆ ನಡೆಯಬಹುದು ಅಂತ ಪರಮೇಶ್ವರ್ ತಿಳಿಸಿದರು.