ತಮ್ಮ ನೆಚ್ಚಿನ ತೋಟದಲ್ಲೇ ಮಣ್ಣಲ್ಲಿ ಮಣ್ಣಾಗಿ ಮಲಗಿದರು ಹಿರಿಯ ನಟಿ ಲೀಲಾವತಿ (Leelavathi). ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಬಳಿ ಲೀಲಾವತಿ ಅವರ ಫಾರ್ಮ್ ಹೌಸ್ ಇದೆ. ಅದರ ಸಮೀಪದಲ್ಲೇ ತೋಟ ಕೂಡ ಇದೆ. ಅದೇ ತೋಟದಲ್ಲೇ ಹಿಂದೂ ಸಂಪ್ರದಾಯದಂತೆ ಲೀಲಾವತಿ ಅವರ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ (Vinod Raj) ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು.
ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತು ತಂದ ಅಂಬುಲೆನ್ಸ್ ಅನ್ನು ಅಲ್ಲಲ್ಲಿ ತಡೆದು, ಲೀಲಾವತಿ ಅವರ ಅಂತಿಮ ದರ್ಶನ ಪಡೆದರು ಅಭಿಮಾನಿಗಳು. ಅದರಲ್ಲೂ ಸೋಲದೇವನಹಳ್ಳಿ ಸುತ್ತಲಿನ ಅನೇಕ ಗ್ರಾಮಸ್ಥರು, ಮನವಿ ಮಾಡಿಕೊಂಡು ಅಂಬುಲೆನ್ಸ್ ನಿಲ್ಲಿಸುವಲ್ಲಿ ಯಶಸ್ವಿ ಆದರು. ತಮ್ಮ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು.
ಬೆಂಗಳೂರಿನಿಂದ ತಂದೆ ಪಾರ್ಥಿವ ಶರೀರವನ್ನು ನವಿಲಿನಾಕೃತಿಯ ವಿಶೇಷ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. 200 ಮೀಟರ್ ಉದ್ದ ಪಾರ್ಥಿವ ಶರೀರದ ಮೆರವಣಿಗೆ ಕೂಡ ಮಾಡಲಾಯಿತು. ನಂತರ ಪೊಲೀಸ್ ಗೌರವ ಸಲ್ಲಿಸಲಾಯಿತು. ಅನೇಕ ಗಣ್ಯರು ಮತ್ತೊಂದು ಬಾರಿ ಅಂತಿಮ ನಮನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಅಗಲಿದ ನಟಿಯ ಅಂತ್ಯ ಸಂಸ್ಕಾರ ನಡೆಸಲಾಯಿತು.
ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಮತ್ತು ಲೀಲಾವತಿ ಅವರು ಅಭಿಮಾನಿಗಳು ಸೋಲದೇವನಹಳ್ಳಿಗೆ ಆಗಮಿಸಿದ್ದರು. ಇಡೀ ಊರಿಗೆ ಊರೇ ಒಂದು ಕಡೆ ಕಣ್ಣೀರಿಡುತ್ತಿದ್ದರೆ, ಮತ್ತೊಂದು ಕಡೆ ನೆಚ್ಚಿನ ನಟಿಯನ್ನು ಕಳೆದುಕೊಂಡ ಅಭಿಮಾನಿಗಳು ರೋಧಿಸೋದು ಕಂಡು ಬಂತು. ಮಣ್ಣಲ್ಲಿ ಮಣ್ಣಾದ ಮಹಾನ್ ನಟಿ ಲೀಲಾವತಿ. ‘ಸ್ವಾಭಿಮಾನಿ ನಲ್ಲೆ’ಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ ಅಸಂಖ್ಯಾತ ಅಭಿಮಾನಿಗಳು.