ಚಿಕ್ಕಬಳ್ಳಾಪುರ: ಚಾರ್ಲಿ 777 ಸಿನಿಮಾದಲ್ಲಿ ಶ್ವಾನ ಚಾರ್ಲಿ ತನ್ನ ನಟನೆಯಿಂದ ಎಲ್ಲಾ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುತ್ತಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲೂ ಸೇಮ್ ಟು ಸೇಮ್ ಚಾರ್ಲಿಯನ್ನೇ ಹೋಲುವ ಅದೊಂದು ಶ್ವಾನ ಎಲ್ಲರ ಪ್ರೀತಿಗೆ ಕಾರಣವಾಗಿತ್ತು. ಆದರೆ ಅದೇ ಪ್ರೀತಿಯ ಶ್ವಾನ ಇಂದು ಎಲ್ಲರನ್ನೂ ಬಿಟ್ಟು ಅಗಲಿದ್ದು ಇಡೀ ಪೊಲೀಸ್ ಇಲಾಖೆ ಕಂಬನಿ ಮಿಡಿಯುವಂತೆ ಮಾಡಿದೆ.
ಅಗಲಿದ ಪ್ರೀತಿಯ ಶ್ವಾನದ ಅಂತ್ಯಕ್ರಿಯೆಯನ್ನು ಚಿಕ್ಕಬಳ್ಳಾಪುರ ಹೊರವಲಯದ ಅಣಕನೂರು ಬಳಿಯ ಎಸ್ಪಿ ಕಚೇರಿಯ ಆವರಣದಲ್ಲೇ ಮಾಡಿ ಪೊಲೀಸರು ಮಾನವೀಯತೆ ಮೆರೆದು ಮಾದರಿಯೂ ಆಗಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿದ್ದ ಶ್ವಾನ ಚಿತ್ರಾ 10 ವರ್ಷಗಳ ಕಾಲ ಬಾಂಬ್ ಪತ್ತೆ ದಳದಲ್ಲಿ ಸೇವೆ ಸಲ್ಲಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ಗಣ್ಯಾತಿ ಗಣ್ಯರ 100 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಬಾಂಬ್ ಪತ್ತೆ ಹಚ್ಚುವ ಭದ್ರತಾ ಕಾಯಕದಲ್ಲಿ ತೊಡಗಿತ್ತು. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್ ಠಾಕ್ರೆ ರಾಜೀನಾಮೆ
ಕಳೆದ ವರ್ಷ ಮಾರ್ಚ್ನಲ್ಲಿ ನಿವೃತ್ತಿಯಾಗಿದ್ದ ಚಿತ್ರಾ ತರಬೇತುದಾರ ಮುಖ್ಯ ಪೇದೆ ಅರ್ಜುನ್ ಮನೆ ಸೇರಿತ್ತು. ನಿವೃತ್ತಿಯಾದ ನಂತರ ಪ್ರೀತಿಯ ಶ್ವಾನವನ್ನು ಯಾರಿಗೂ ಕೊಡಲು ಇಷ್ಟ ಇಲ್ಲದ ಅರ್ಜುನ್, ತನ್ನ ಮನೆಯಲ್ಲಿ ಮನೆ ಮಗಳು ಎಂಬಂತೆ ಶ್ವಾನ ಚಿತ್ರಾಳನ್ನು ಸಾಕಿ ಸಲಹುತ್ತಿದ್ದರು.
ಆದರೆ ಪ್ರೀತಿಯ ಶ್ವಾನ ಚಿತ್ರಾ ವಯೋಸಹಜವಾಗಿ ಇಂದು ಸಾವನ್ನಪ್ಪಿದ್ದು, ಪೊಲೀಸರ ಕಣ್ಣಲ್ಲಿ ನೀರು ತರಿಸಿದೆ. ಪ್ರೀತಿಯ ಶ್ವಾನ ಚಿತ್ರಾಳ ಸಾವು ಇಡೀ ಪೊಲೀಸ್ ಇಲಾಖೆಯನ್ನು ದುಃಖತಪ್ತ ಮಾಡಿದ್ದು, ಪೊಲೀಸರೆಲ್ಲರೂ ಕಂಬನಿ ಮಿಡಿಯುವಂತೆ ಮಾಡಿದೆ. 10 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ಮಾನವೀಯತೆ ಮೆರೆದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲೇ ಆಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದು ಮಾದರಿ ಸಹ ಆಗಿದ್ದಾರೆ. ಇದನ್ನೂ ಓದಿ: ಶಿವಸೇನೆ ಅರ್ಜಿ ವಜಾ – ಗುರುವಾರ ವಿಶ್ವಾಸ ಮತಯಾಚನೆಗೆ ಸುಪ್ರೀಂ ಆದೇಶ
ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡಿ ಅಗಲಿದ ಶ್ವಾನ ಚಿತ್ರಾಳಿಗೆ ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದ್ದಾರೆ. ತಮ್ಮ ಮನೆ ಮಗಳಂತೆ ಇದ್ದ ಶ್ವಾನ ಚಿತ್ರಾಳ ಅಗಲಿಕೆ ತರಬೇತುದಾರ ಅರ್ಜುನ್, ಅವರ ಸಹೋದರ ಅರುಣ್, ಹಾಗೂ ಅವರ ತಾಯಿ, ಕುಟುಂಬಸ್ಥರನ್ನು ಕಣ್ಣೀರ ಕೋಡಿ ಹರಿಸುವಂತೆ ಮಾಡಿದೆ. ಏನೇ ಆದರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಕ್ಕೆ ಪೊಲೀಸ್ ಇಲಾಖೆ ಆವರಣದಲ್ಲೇ ಅಂತಿಮ ಕ್ರಿಯಾ ವಿಧಿ ವಿಧಾನ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಮಾದರಿಯಾಗಿದ್ದಾರೆ.