ನವದೆಹಲಿ: ಟೀಂ ಇಂಡಿಯಾ ಯುವ ಬೌಲರ್ ಕುಲದೀಪ್ ಯಾದವ್ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದರ ಬಗ್ಗೆ ಮಾಹಿತಿ ನೀಡಿದ್ದು, ತಮ್ಮನ್ನು ತಂಡಕ್ಕೆ ಆಯ್ಕೆ ಮಾಡದೆ ನಿರ್ಲಕ್ಷ್ಯ ವಹಿಸಿದ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಕುಲದೀಪ್ ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ. ನನ್ನ 13 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ಅಂಡರ್ 15-ತಂಡಕ್ಕೆ ಆಯ್ಕೆಯಾಗಲು ಕಠಿಣ ತರಬೇತಿ ಪಡೆದು ಸಿದ್ಧವಾಗಿದ್ದೆ. ಆದರೆ ತಂಡದ ಆಯ್ಕೆದಾದರು ನನ್ನನ್ನು ಆಯ್ಕೆ ಮಾಡಿರಲಿಲ್ಲ, ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಬಾಲ್ಯದ ದಿನಗಳಲ್ಲಿ ವೇಗದ ಬೌಲರ್ ಆಗಲು ಇಷ್ಟಪಟ್ಟಿದ್ದೆ, ಆದರೆ ಕೋಚ್ ಸಲಹೆ ನೀಡಿದ ಪರಿಣಾಮ ನಾನು ಸ್ಪಿನ್ ಬೌಲರ್ ಆದೆ ಎಂದು ಹೇಳಿದ್ದಾರೆ.
ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾದ ಕಾರಣ ನಾನು ಸಂತೋಷಕ್ಕಾಗಿ ಕ್ರಿಕೆಟ್ ಆಡುತ್ತಿದ್ದೆ. ಆದರೆ ನನ್ನ ತಂದೆ ಕ್ರಿಕೆಟ್ ಆಟವನ್ನು ಆಯ್ಕೆ ಮಾಡಿಕೊಳ್ಳಲು ಬೆಂಬಲ ನೀಡಿದರು. ಇದರಂತೆ ನಂತರದ ದಿನಗಳಲ್ಲಿ ಕಠಿಣ ಆಭ್ಯಾಸವನ್ನು ನಡೆಸಿದೆ. ನಾನು ಎಂದು ಕ್ರಿಕೆಟ್ ವೃತ್ತಿಯನ್ನಾಗಿ ತೆಗೆದುಕೊಳ್ಳುವ ಯೋಚನೆ ಮಾಡಿರಲಿಲ್ಲ. ನಮ್ಮ ತಂದೆಯೇ ನನ್ನನ್ನು ಕೋಚ್ ಬಳಿ ಕರೆದುಕೊಂಡು ಹೋಗಿ ತರಬೇತಿಗೆ ಸೇರಿಸಿದ್ದರು ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಟೀಂ ಇಂಡಿಯಾ ಯಶಸ್ವಿ ಸ್ಪಿನ್ ಬೌಲರ್ ಎನಿಸಿಕೊಂಡಿರುವ ಜಡೇಜಾ ಹಾಗೂ ಆರ್.ಆಶ್ವಿನ್ ತಂಡದಲ್ಲಿ ನಿರಂತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಯುವ ಆಟಗಾರರಿಗೆ ಅವಕಾಶ ಸಿಗುವುದು ಕಷ್ಟ ಸಾಧ್ಯವಾಗಿತ್ತು. ಈ ವೇಳೆ ನಿರಂತರ ಕ್ರಿಕೆಟ್ ಪಂದ್ಯಗಳಿಂದಾಗಿ ಹಿರಿಯ ಬೌಲರ್ ಗಳಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದ್ದರಿಂದ ಕುಲದೀಪ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿತ್ತು.
ಈ ವರ್ಷ ಮಾರ್ಚ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕುಲದೀಪ್ ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದೂವರೆಗೆ ಆಡಿರುವ 2 ಟೆಸ್ಟ್ ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ. ಅಲ್ಲದೇ 12 ಏಕದಿನ ಪಂದ್ಯಗಳಿಂದ 19 ವಿಕೆಟ್ ಹಾಗೂ 5 ಟಿ-20 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ವಿಶೇಷವಾಗಿ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆಯನ್ನು ಕುಲದೀಪ್ ಮಾಡಿದ್ದಾರೆ.