ಬೀದರ್: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಎಂದು ಸರ್ಕಾರ ಹಲವು ಕಸರತ್ತು ಮಾಡ್ತಿದೆ. ಆದ್ರೆ ಜಿಲ್ಲೆಯಲ್ಲಿ ಮಾತ್ರ ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಇದಕ್ಕೆ ಕಾರಣ ಕುಡಿಯುವ ನೀರು. ಬೇಸಿಗೆ ಇನ್ನು ದೂರ ಇರುವಾಗಲೇ ಗಡಿ ಜಿಲ್ಲೆಯಲ್ಲಿ ನೀರಿನ ಪಾಲಿಟಿಕ್ಸ್ ಶುರುವಾಗಿದೆ. ಬೀದರ್ ನಗರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಖಾಜಾಪೂರ್ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರಹೀಂಖಾನ್ ಕ್ಷೇತ್ರವಾಗಿದ್ದು, ಇಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ಹನಿ ನೀರಿಗಾಗಿ ಮಹಿಳೆಯರು ಕೂಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮಕ್ಕಳು ಶಾಲೆಗೆ ಚಕ್ಕರ್ ಹಾಕಬೇಕಾಗಿದೆ. ನೀರು ಕೊಡುತ್ತೆನೆ ಎಂದು ಚುನಾವಣೆಯ ಟೈಂನಲ್ಲಿ ಕಲರ್ ಕಲರ್ ಕಾಗೆ ಹಾರಿಸಿದ ಮಿನಿಸ್ಟರ್ ಮಾತ್ರ ಇಂದು ಬಿಂದಾಸ್ ಆಗಿದ್ದಾರೆ.
ಚುನಾವಣೆಯ ಸಮಯದಲ್ಲಿ ನೀರು ಕೊಡ್ತೇನೆ, ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುತ್ತೇನೆ ಅಂತ ರಹೀಂಖಾನ್ ಅವರು ಜನರಿಗೆ ಆಶ್ವಾಸನೆ ಕೊಟ್ಟಿದ್ದರು. ಆದ್ರೆ ಈಗ ಗೆದ್ದು ಮಂತ್ರಿಯಾದ ಬಳಿಕ ರಹೀಂಖಾನ್ ಅವರು ಮಾತ್ರ ಏನೂ ಟೆನ್ಶನ್ ಇಲ್ಲದೇ ಬಿಂದಾಸಾಗಿದ್ದಾರೆ. ಜನರು ನೀರಿಲ್ಲದೆ ಪರದಾಡುತ್ತಿದ್ದರೂ ಅವರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ದಿನನಿತ್ಯ ಸಾಕಷ್ಟು ದೂರ ಹೋಗಿ ಕುಡಿಯುವ ನೀರನ್ನು ತರುವುದೇ ಈ ಭಾಗದ ಜನರಿಗೆ ಕೆಲಸವಾಗಿ ಬಿಟ್ಟಿದೆ. ಆದ್ದರಿಂದ ಈ ಭಾಗದಲ್ಲಿ ಮಕ್ಕಳು ಶಾಲೆಗೆ ಗೈರಾಗಿ ನೀರು ತರಲು ಕಿಲೋ ಮೀಟರ್ಗಟ್ಟಲೆ ಹೋಗುತ್ತಿದ್ದಾರೆ.
ಪ್ರತಿವರ್ಷ ಸರ್ಕಾರ ಕುಡಿಯೋ ನೀರಿಗೆ ಅಂತಾನೆ ಕೋಟ್ಯಂತರ ರೂಪಾಯಿ ಅನುದಾನ ಕೊಡ್ತಿದೆ. ಆದ್ರೆ ಇಲ್ಲಿಯವರೆಗೆ ಈ ಭಾಗಕ್ಕೆ ಯಾವುದೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೈರಾಣಾಗಿ ಹೋಗಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಗೆದ್ದು ಮಂತ್ರಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಕ್ಷೇತ್ರದ ಜನರು ನೀರಿನ ಸಮಸ್ಯೆಗೆ ಪರಿಹಾರ ಕಾಣದಿರೋದು ಮಾತ್ರ ವಿಪರ್ಯಾಸ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv