ಭೋಪಾಲ್: ಜಗತ್ತಿನಲ್ಲಿ ಹಲವು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ದಂಪತಿ ವಿಚ್ಛೇದನ ತೆಗೆದುಕೊಳ್ಳುವ ಪ್ರಕರಣ ದಿನನಿತ್ಯ ನಡೆಯುತ್ತಲೇ ಇರುತ್ತದೆ, ಆದರೆ ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿರೋ ವಿಚಿತ್ರ ಪ್ರಕರಣವೊಂದು ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹೌದು. ಇದೇನಪ್ಪ ಕಪ್ಪೆಗಳಿಗೂ ವಿಚ್ಛೇದನವಾ ಎಂದು ಶಾಕ್ ಆಗಬಹುದು. ಆದರೂ ಇದು ನಿಜ. ಹಳೆ ಕಾಲದಿಂದಲೂ ಊರಿಗೆ ಬರಗಾಲ ಬಂದರೇ ಕಪ್ಪೆಗಳ ಮದುವೆ ಮಾಡಿಸಿ, ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದ್ರದಾಯ ರೂಡಿಯಲ್ಲಿದೆ. ಅದರಂತೆ ಮಳೆ ಬರಲಿ ಎಂದು ಭೋಪಾಲ್ನ ಓಂ ಶಿವ ಸೇವಾ ಶಕ್ತಿ ಮಂಡಳಿಯ ಭಕ್ತರು ಕಳೆದ ಜುಲೈ ತಿಂಗಳಲ್ಲಿ ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿ ಸುದ್ದಿಯಾಗಿದ್ದರು.
ಕಪ್ಪೆಗಳಿಗೆ ಮದುವೆ ಮಾಡಿಸಿದ ಬಳಿಕ ಭೋಪಾಲ್ನಲ್ಲಿ ಹೆಚ್ಚು ಮಳೆಯಾಗಿ ಪ್ರವಾಹ ಬಂದು ಅಲ್ಲಿನ ಜನರು ಸಂಕಷ್ಟದಲ್ಲಿದ್ದಾರೆ. ಕಾಕತಾಳೀಯವೆಂಬಂತೆ ಮದುವೆಯಾದ ಕೆಲ ದಿನಗಳಲ್ಲೇ ಭಾರೀ ಮಳೆ ಬಂದು ಪ್ರವಾಹ ಉಂಟಾಗಿ ಅವಾಂತರವನ್ನೂ ಸೃಷ್ಟಿ ಮಾಡಿತು. ಕಪ್ಪೆಗಳ ಮದುವೆ ಮಾಡಿಸಿದ್ದರಿಂದಲೇ ಭಾರೀ ಮಳೆ ಬಂದಿದೆ ಎಂದು ಭಕ್ತರು ಒಂದು ಕಡೆ ಸಂತೋಷ ಪಟ್ಟರೂ, ಇನ್ನೊಂದೆಡೆ ಪ್ರವಾಹ ಉಂಟಾಗಿ ಹಲವಾರು ಕುಟುಂಬಗಳು ಕಷ್ಟ ಪಡಬೇಕಾಗಿದೆ.
ಕಪ್ಪೆಗಳಿಗೆ ಮದುವೆ ಮಾಡಿಸಿದ್ದಕ್ಕೆ ಮಳೆ ಹೆಚ್ಚಾಗಿ ಪ್ರವಾಹ ಬಂತು, ಅವುಗಳಿಗೆ ವಿಚ್ಛೇದನ ಕೊಡಿಸಿದರೆ ಮಳೆ ಕಡಿಮೆಯಾಗುತ್ತೆ ಎಂದು ಕೆಲವರು ಸಲಹೆ ನೀಡಿದ್ದು, ತಡ ಮಾಡದೇ ಮದುವೆ ಮಾಡಿಸಿದ್ದ ಭಕ್ತರು ಬುಧವಾರ ಕಪ್ಪೆಗಳನ್ನು ಹಿಡಿದು, ವಿಚ್ಛೇದನ ಕೊಡಿಸಿದ್ದಾರೆ.
ಈ ಉಪಾಯದಿಂದ ಮಳೆ ಕಡಿಮೆ ಆಗಿ ಪ್ರವಾಹ ಇಳಿಯುತ್ತೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಈ ಘಟನೆ ಬಳಿಕ ಮಳೆ ನಿಂತು ಪ್ರವಾಹ ಇಳಿದರೆ ಅದಕ್ಕೂ ಕಪ್ಪೆಗಳೇ ಕಾರಣ ಎಂದು ಈ ವಿಚ್ಛೇದನ ಉಪಾಯವನ್ನೇ ಮುಂದೆ ಜನ ಅನುಸರಿಸಿಕೊಂಡು ಬಂದರೂ ಅಚ್ಚರಿ ಪಡಬೇಕಾಗಿಲ್ಲ.