ಬೆಂಗಳೂರು: ಇಂದ್ರಜಿತ್ ಮತ್ತು ಗೌರಿ ಲಂಕೇಶ್ ನಡುವೆ ಹೆಚ್ಚು ಆಪ್ತತೆ ಇರಲಿಲ್ಲ. ಹೀಗಾಗಿ ಆದರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹೇಳಿದ್ದಾರೆ.
ಇಂದ್ರಜಿತ್ ಅವರು ನಕ್ಸಲೈಟ್ ಬೆದರಿಕೆ ಇತ್ತು ಎಂದು ಹೇಳಿದ್ದಾರೆ. ಅದರ ಬಗ್ಗೆ ತನಿಖೆಯಾಗಲಿ. ಗೌರಿ ಹಾಗೂ ನನ್ನ ಮಧ್ಯೆ ಯಾವುದೇ ನಕ್ಸಲೈಟ್ ಗಳನ್ನು ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಒಳಜಗಳ ಇರಲಿಲ್ಲ ಎಂದು ಅವರು ತಿಳಿಸಿದರು.
ನಕ್ಸಲೈಟ್ ವಿಚಾರದಲ್ಲಿ ಕೊಂಚ ತಳಮಳ ಇದ್ದಿದ್ದು ನಿಜ. ಕೆಲವರಿಗೆ ನಕ್ಸಲೈಟ್ ಮುಖ್ಯ ವಾಹಿನಿಗೆ ಬರುವುದು ಇಷ್ಟವಿರಲಿಲ್ಲ. ಯಾರು ಅಂತಾ ನಾನು ಹೆಸರು ಹೇಳಲು ಇಚ್ಚಿಸುವುದಿಲ್ಲ. ಕೆಲ ಮಾತುಗಳು ನನ್ನ ಕಿವಿಗೆ ಬಿದ್ದಿದೆ. ಹೀಗಾಗಿ ನಕ್ಸಲೈಟ್ ಆಯಾಮದಲ್ಲೂ ತನಿಖೆಯಾಗಲಿ. ಎಂದೂ ಪ್ಯಾಕೇಜ್ ವಿಚಾರದಲ್ಲಿ ಗೊಂದಲ ಇರಲಿಲ್ಲ. ಅವರ್ಯಾರು ಪ್ಯಾಕೇಜ್ ತೆಗೆದುಕೊಂಡಿರಲಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿ ಪೊಲೀಸರು ವಿನಾಕಾರಣ ನೂರ್ ಶ್ರೀಧರ್ ಅವರಿಗೆ ಕಿರಿಕ್ ಮಾಡಿದ್ದರು. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆ ಎಂದರು.
ಗೌರಿ ಪ್ರಕರಣದಲ್ಲಿ ನನ್ನ ಅನುಮಾನ ಇರುವುದು ಕೋಮುವಾದಿಗಳ ಮೇಲೆಯೇ. ಮಂಗಳೂರಿನ ಹತ್ಯೆ ಮತ್ತು ಇದಕ್ಕೆ ಏನಾದರೂ ಸಂಬಂಧ ಇರಬಹುದು ಎನ್ನುವ ಅನುಮಾನ ಇದೆ ಎಂದರು.
ವಿಶೇಷ ತನಿಖಾ ತಂಡದ ತನಿಖೆ ಮುಂದುವರೆಯಲಿ. ಸಿಬಿಐ ಪ್ರವೇಶಿಸಿದರೆ ಮೋದಿ ಕೈವಾಡ ಎಂದು ಹೇಳಲಾಗುತ್ತದೆ. ಸಿಐಡಿ ಆದರೆ ರಾಜ್ಯ ಸರ್ಕಾರದ ಕೈಗೊಂಬೆ ಎನ್ನಲಾಗುತ್ತದೆ. ಒಟ್ಟಿನಲ್ಲಿ ನಿಷ್ಠಾವಂತ ಅಧಿಕಾರಿಗಳಿಂದ ತನಿಖೆಯಾಗಲಿ. ದುಡ್ಡು ತಿನ್ನುವ ಕೇಸ್ ಮುಚ್ಚಿ ಹಾಕುವ ಅಧಿಕಾರಿಗಳಿಂದ ತನಿಖೆ ನಡೆಯೋದು ಬೇಡ ಎಂದು ಅವರು ಆಗ್ರಹಿಸಿದರು.