– 5 ಸಾವಿರ ಮಂದಿಯ ಡೀಟೆಲ್ಸ್ ಕಲೆಕ್ಟ್
ಚಿಕ್ಕಬಳ್ಳಾಪುರ: ದಸರಾ-ದೀಪಾವಳಿ ಹಬ್ಬ ಅಂದ್ರೆ ಸಾಕು ಎಲ್ಲಿಲ್ಲದ ಆಫರ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಅಂತೆಯೇ ಈ ಬಾರಿಯ ದಸರಾ, ದೀಪಾವಳಿ ಹಬ್ಬದ ಸಮಯದ ಉಪಚುನಾವಣೆಯಲ್ಲೂ ಭರ್ಜರಿ ಆಫರ್ ಗಳ ಸುರಿಮಳೆಯನ್ನೇ ರಾಜಕಾರಣಿಗಳು ಸುರಿಸಿದ್ದಾರೆ.
ಹೌದು. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹೆಂಡ, ಸೀರೆ ಹಂಚೋದು ಕಾಮನ್ ಆಗಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಸೈಟ್ ಆಮಿಷ ಒಡ್ಡಿದ್ದಾರೆ. 15 ದಿನದಲ್ಲೇ 5,000 ಮಂದಿಗೆ ಸರ್ಕಾರದಿಂದ ಉಚಿತ ನಿವೇಶನ ನೀಡೋದಾಗಿ ಅನರ್ಹ ಶಾಸಕ ಸುಧಾಕರ್ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ ನಗರದ ವಸತಿರಹಿತ 5,000 ಮತದಾರರಿಂದ ದಾಖಲೆ ಸಂಗ್ರಹಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಆಗಮಿಸಲಿದ್ದು, ಅಂದೇ 5,000 ಮಂದಿಗೆ ಉಚಿತ ನಿವೇಶನಗಳ ಹಂಚಿಕೆ ಮಾಡೋದಾಗಿ ಭರವಸೆ ನೀಡಿದ್ದಾರೆ.
ಸುಧಾಕರ್ ಅವರ ಈ ಆಫರ್ ಗೆ ಗೌರಿಬಿದನೂರು ಶಾಸಕ, ಮಾಜಿ ಸಚಿವ ಶಿವಶಂಕರರೆಡ್ಡಿ ಕಿಡಿಕಾರಿದ್ದಾರೆ. ಗಿಮಿಕ್ ಮಾಡಿ ಜನರಿಗೆ ಟೋಪಿ ಹಾಕೋ ಕೆಲಸ ಸುಧಾಕರ್ ಗೆ ಕರಗತವಾಗಿದೆ. ಸುಧಾಕರ್ ಮರುಳು ಮಾತುಗಳನ್ನ ಜನರು ನಂಬಬಾರದು ಅಂದಿದ್ದಾರೆ.
ಒಟ್ಟಿನಲ್ಲಿ ಉಪಚುನಾವಣೆಯ ಹೊಸ್ತಿಲಲ್ಲಿ ಸುಧಾಕರ್ ಮತದಾರರಿಗೆ ಭರ್ಜರಿ ಆಫರ್ಸ್ ಕೊಟ್ಟಿದ್ದಾರೆ. ಆದರೆ ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.