ಚಿಕ್ಕೋಡಿ (ಬೆಳಗಾವಿ): ದಿವಗಂತ ಸಚಿವ ಉಮೇಶ್ ಕತ್ತಿ (Umesh Katti) ಅವರ ಜನ್ಮದಿನಾಚರಣೆ ಅಂಗವಾಗಿ ಮಾರ್ಚ್ 8 ರಿಂದ 10ರ ವರೆಗೆ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅವರ ಸುಪುತ್ರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ (Nikhil Katti) ಅವರು ತಿಳಿಸಿದ್ದಾರೆ.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಂದೆಯವರಾದ ದಿ.ಉಮೇಶ್ ಕತ್ತಿ ಅವರ 62 ನೇ ಜನ್ಮ ದಿನಾಚರಣೆ ಮಾರ್ಚ್ 14 ರಂದು ಇದೆ. ಅಂದಿನಿಂದ ಪಟ್ಟಣದ ಮಹಾಲಕ್ಷ್ಮಿ ದೇವಿ ಜಾತ್ರೆ ಆರಂಭವಾಗುತ್ತಿರುವ ಹಿನ್ನೆಲೆ ಮಾರ್ಚ್ 8 ರಿಂದ 10 ರ ವರೆಗೆ ಮೂರು ದಿನಗಳ ಕಾಲ ದಿ. ವಿಶ್ವನಾಥ್ ಕತ್ತಿ ಮತ್ತು ದಿ.ರಾಜೇಶ್ವರಿ ಕತ್ತಿ ಧರ್ಮಾರ್ಥ ಟ್ರಸ್ಟ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣು ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ನೊಂದಣಿ ಆರಂಭವಾಗಿದ್ದು, ಕಣ್ಣಿನ ಸಮಸ್ಯೆ ಇದ್ದವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಸಿದ್ರಾಮಣ್ಣನಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ: ಬೊಮ್ಮಾಯಿ ವಾಗ್ದಾಳಿ
ಈ ಸಂಧರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಪವನ ಕತ್ತಿ, ಉದ್ಯಮಿ ಪೃಥ್ವಿ ಕತ್ತಿ, ಪುರಸಭೆ ಅಧ್ಯಕ್ಷ ಎಕೆ ಪಾಟೀಲ, ಮುಖಂಡರಾದ ರಾಜೇಂದ್ರ ಪಾಟೀಲ್, ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಶ್ರೀಶೈಲಪ್ಪ ಮಗದುಮ್ಮ, ಪ್ರಭುಗೌಡ ಪಾಟೀಲ, ಸುನೀಲ ಪರ್ವತರಾವ್, ಅಶೋಕ ಪಟ್ಟಣಶೆಟ್ಟಿ, ಕಲಗೌಡಾ ಪಾಟೀಲ್, ನಂದು ಮುಡಶಿ, ಜಯಗೌಡಾ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.