ಚಿಕ್ಕಮಗಳೂರು: ಅದೊಂದು ಕ್ರೂರ ಪ್ರಾಣಿ. ಏಕಾಏಕಿ ದಾಳಿ ಮಾಡೋದು ಅದರ ಚಾಳಿ. ರಾತ್ರಿಯಲ್ಲಷ್ಟೆ ಸಂಚರಿಸೋ ಅದು ಸಾಮಾನ್ಯವಾಗಿ ಹಗಲಲ್ಲಿ ಯಾರ ಕಣ್ಣಿಗೂ ಹೆಚ್ಚಾಗಿ ಕಾಣಲ್ಲ. ಆದ್ರೆ ಅಂತಹ ಪ್ರಾಣಿ ಇಲ್ಲಿ ಆಂಜನೇಯನ ಪರಮಭಕ್ತನಾಗಿದೆ. ಮೂರ್ ಹೊತ್ತು ಊಟ ಮಾಡ್ಕೊಂಡ್ ಅಲ್ಲೇ ವಾಸವಿದೆ. ಶನಿವಾರ ಬಂತೆಂದ್ರೆ ಆಂಜನೇಯನನ್ನ ಬಿಟ್ಟು ಕದಲೋದಿಲ್ಲ.
ಹೀಗೆ ನಿಂತಲ್ಲಿ ನಿಲ್ಲದೆ, ಕಾಲಿಗೆ ಚಕ್ರ ಕಟ್ಕೊಂಡಂತೆ ಓಡಾಡ್ತಿರೋ ಇದನ್ನ ನೋಡಿ. ಹ್ಹೇ….ನಾಯಿ ಅನ್ಕೋಬೇಡಿ, ಇದು ನರಿ. ತುಂಬಾನೇ ಸೂಕ್ಷ್ಮ ಹಾಗೂ ಡೆಂಜರಸ್ ಪ್ರಾಣಿ. ಕೇವಲ ಅರಣ್ಯದಲ್ಲಷ್ಟೇ ಇರುತ್ತೆ. ಆದ್ರೆ ದಾರಿ ತಪ್ಪಿ ಅಮ್ಮನಿಂದ ಬೇರಾದ ಈ ನರಿಮರಿ, ನಾಡಲ್ಲೇ ಸೆಟ್ಲ್ ಆಗಿದೆ.
ಇದು ಸೆಟ್ಲ್ ಆಗಿರೊದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮಲ್ಲೇಶ್ವರ ಗ್ರಾಮದಲ್ಲಿ. ಇಲ್ಲಿನ ಆಂಜನೇಯ ದೇವಾಲಯದ ಆವರಣವನ್ನ ಬಿಟ್ಟು ಎಲ್ಲೂ ಹೋಗದ ನರಿಮರಿ, ಚಿಕ್ಕ ನಾಯಿಗಳು ಬಂದ್ರೆ ಹೆದರಿ ಓಡಿಸುತ್ತೆ, ದೊಡ್ಡವು ಬಂದ್ರೆ ಓಡಿಹೋಗುತ್ತೆ. ಸ್ಥಳೀಯರು ಕೊಡೋ ಹಾಲು, ಬಿಸ್ಕೆಟ್, ತೆಂಗಿನಕಾಯಿಯನ್ನ ತಿನ್ಕೊಂಡು ಕಳೆದ ಎರಡು ತಿಂಗಳಿನಿಂದ ಇಲ್ಲೇ ಇದೆ. ನರಿಯ ಈ ಜೀವನಶೈಲಿಯನ್ನ ಕಂಡ ಸ್ಥಳೀಯರು ನರಿ ಹೀಗೆಲ್ಲಾ ಇರೋ ಪ್ರಾಣಿಯಲ್ಲ, ಕಲಿಗಾಲ ಏನ್ ಬೇಕಾದ್ರು ಆಗ್ಬೋದು ಅಂತಿದ್ದಾರೆ.
ದೇಗುಲದ ಹಿಂದಿನ ಕಲ್ಲಿನ ಗುಡ್ಡದಲ್ಲಿ ನರಿಮರಿ ವಾಸ ಮಾಡುತ್ತೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹಾಲು ಕರೆಯೋ ವೇಳೆಗೆ ಪಕ್ಕದಲ್ಲೇ ಇರೋ ಮನೆಗೆ ಬರುತ್ತೆ. ಹಾಲು ಕುಡಿದು ಮತ್ತೆ ದೇವಾಲಯದ ಆವರಣಕ್ಕೆ ಹೋಗುತ್ತೆ. ದೇವಾಲಯಕ್ಕೆ ಬರೋ ಭಕ್ತರ ಕೈ ನೆಕ್ಕುತ್ತಾ, ಕಾಲು ಮೂಸೂತ್ತಾ ಆಟವಾಡುತ್ತೆ.
ನರಿಯನ್ನು ಅದೃಷ್ಟದ ಪ್ರಾಣಿ ಅಂತಾ ಭಾವಿಸಲಾಗಿದೆ. ಬೆಳಗೆದ್ದು ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಅದಕ್ಕೆ ಏನೋ, ನರಿ ನೋಡಲು ದೇಗುಲಕ್ಕೆ ಜನ ಸಾಗರವೇ ಬರ್ತಿದೆ.