ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಕುತ್ ಮಾರಮ್ಮ ದೇಗುಲದ ವಿಷ ಪ್ರಸಾದದ ಸುತ್ತ ಅನುಮಾನಗಳ ಹುತ್ತ ಬೆಳೆದಿದ್ದು, ಉತ್ತರ ಸಿಗದ 4 ಪ್ರಶ್ನೆಗಳು ಈಗ ಜನರಲ್ಲಿ ಚರ್ಚೆಯಾಗುತ್ತಿದೆ.
ಕಿಚ್ಕುತ್ ಮಾರಮ್ಮನ ಪ್ರಸಾದ ಸೇವನೆಯಿಂದಾಗಿ ಇದೂವರೆಗೂ 14 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 101 ಮಂದಿ ಭಕ್ತರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಸದ್ಯ ಪೊಲೀಸರು ಘಟನೆ ಬಗ್ಗೆ ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ. ಆದರೆ ಭಕ್ತರು ಸೇವಿಸಿದ್ದ ಪ್ರಸಾದದ ಮೇಲೆಯೇ ಅನುಮಾನ ಹೊರಬಿದ್ದಿದೆ.
ಉತ್ತರ ಸಿಗದ ಪ್ರಶ್ನೆಗಳು:
– ವಿಷದ ಪ್ರಸಾದವನ್ನು ದೇವಸ್ಥಾನದ ಯಾವೊಬ್ಬ ಟ್ರಸ್ಟ್ ಸಿಬ್ಬಂದಿಯೂ ಸ್ವೀಕರಿಸಿಲ್ಲ ಯಾಕೆ?
– ಪ್ರಸಾದ ಸೇವಿಸಿದರಲ್ಲಿ ಬಹುತೇಕ ಬೇರೆ ಗ್ರಾಮದ ಭಕ್ತರೇ ಆಗಿದ್ದಾರೆ ಯಾಕೆ?
– ಸುಲ್ವಾಡಿ ಗ್ರಾಮದವರು ಪ್ರಸಾದವನ್ನು ತಿಂದಿಲ್ಲ, ಮೊದಲೇ ಸುಲ್ವಾಡಿ ಗ್ರಾಮಸ್ಥರಿಗೆ ಗೊತ್ತಿತ್ತಾ?
– ಗೋಪುರ ಶಂಕುಸ್ಥಾಪನೆಗೆಂದೇ ಬಂದಿದ್ದ ಭಕ್ತರಿಗೆ ಮಾತ್ರವೇ, ಈ ಪ್ರಸಾದವನ್ನು ಮಾಡಲಾಗಿತ್ತು. ಅಲ್ಲದೇ ಇದನ್ನು ಇತರೆ ಭಕ್ತರಿಗಾಗಿ ಮಾಡಿಲ್ಲ ಯಾಕೆ?
ಏನಿದು ಘಟನೆ?
ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ : ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv