ಶಿವಮೊಗ್ಗ: ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪ ಬಳಿ ಕಾಡಿನ ಅಂಚಿನಲ್ಲಿ ಇಂದು ಮಧ್ಯಾಹ್ನ ನಾಲ್ವರು ಅಪರಿಚಿತರು ಕಂಡು ಬಂದಿದ್ದು, ಅವರು ನಕ್ಸಲರು ಎನ್ನವ ಶಂಕೆ ವ್ಯಕ್ತವಾಗಿದೆ. ಅವರ ಕೈಯಲ್ಲಿ ಬಂದೂಕು, ಹ್ಯಾಂಡಿಕ್ಯಾಮ್ ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಕ್ಕಿನಕೊಪ್ಪದ ಹಳೇ ಚರ್ಚ್ ಸಮೀಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರಿಗೆ ಈ ಗುಂಪು ಕಾಣಿಸಿದೆ. ತಕ್ಷಣವೇ ಅವರು ನೀವು ಯಾರು ಎಂದು ಪ್ರಶ್ನಿಸುತ್ತಿದ್ದಂತೆ ಅಪರಿಚಿತ ನಾಲ್ವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಹೊಲದಿಂದ ಗ್ರಾಮಕ್ಕೆ ಮರಳಿದ ಅವರು ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇಲೆ ಅರಣ್ಯ ಪ್ರದೇಶಕ್ಕೆ ಆಗಮಿಸಿದ ತುಂಗಾ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ. ಸೋಮವಾರ ಕೂಡ ಆಗುಂಬೆಯಿಂದ ಎಎನ್ಎಫ್ ತಂಡ ಬರಲಿದ್ದು, ಕೂಂಬಿಂಗ್ ಮುಂದುವರೆಯಲಿದೆ.
ಮಲೆನಾಡಿಂದ ನಕ್ಸಲರು ಮರೆಯಾಗಿದ್ದಾರೆ ಎಂದೇ ಭಾವಿಸಲಾಗಿದೆ. ಆದರೆ ಇಂದು ಕಾಣಿಸಿಕೊಂಡ ಅಪರಿಚಿತರು ನಕ್ಸಲರೇ ಎಂದು ಶಂಕಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv