ಹೈದರಾಬಾದ್: ಒಂದೇ ದಿನ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಎ.ವಂದನ(17), ಕೆ. ಸೈಕುಮಾರ್(17), ಡಿ. ವರ್ಷ(16) ಮತ್ತು ಶ್ರೀನಿತ್ಯ(16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ಶುಕ್ರವಾರ ಪರೀಕ್ಷೆಯ ಫಲಿತಾಂಶ ಘೋಷಣೆಯಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಂದನ ವನಸ್ಥಳಪುರಂನ ನಿವಾಸಿಯಾಗಿದ್ದು, ಶ್ರೀ ಚೈತನ್ಯ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಪಿ.ಸಿ. ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಪರೀಕ್ಷೆಯ ಫಲಿತಾಂಶ ಬಂದಿದೆ. ಅದರಲ್ಲಿ 440 ಅಂಕದಲ್ಲಿ 325 ಅಂಕಗಳನ್ನು ಗಳಿಸಿದ್ದಳು. ಇದರಿಂದ ಕಡಿಮೆ ಅಂಕ ಬಂದಿದೆ ಎಂದು ಮನೆಯಿಂದ ಸಹೋದರ ಮತ್ತು ಪೋಷಕರು ಹೊರಗೆ ಹೋದ ಸಂದರ್ಭದಲ್ಲಿ ಕೋಣೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೈತ್ಲಾಪುರ್ ಗ್ರಾಮದ ನಿವಾಸಿಯಾಗಿರೋ ಕೆ. ಸೈಕುಮಾರ್ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಈತನ ಪೋಷಕರು ಈ ವಿಚಾರವನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಹೇಳಿದ್ದರು. ಆದ್ರೂ ಸೈಕುಮಾರ್ ಮಾತ್ರ ತಂದೆ-ತಾಯಿ ಕೆಲಸಕ್ಕೆ ತೆರಳಿದ ಬಳಿಕ ನೇಣು ಹಾಕಿಕೊಂಡಿದ್ದಾನೆ. ಘಟನೆಯ ಬಳಿಕ ಸ್ನೇಹಿತನ ಸಹಾಯದಿಂದ ಕೋಣೆಯ ಬಾಗಿಲು ಮುರಿದು ಒಳಹೋಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮಡಿಪಲ್ಲಿ ನಿವಾಸಿ ವರ್ಷ(16) ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆದ ನಂತರ ನೇಣಿಗೆ ಶರಣಾಗಿದ್ದಾಳೆ. ಜಗದ್ಗಿರಿಗುಟ್ಟಾ ನಿವಾಸಿಯಾದ ಶ್ರೀನಿತ್ಯ (16) ಪ್ರಥಮ ವರ್ಷದ ಎಮ್ಪಿಸಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ನಾಲ್ಕು ವಿಷಯಗಳಲ್ಲಿ ಫೇಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮನನೊಂದು ಅಪಾರ್ಟ್ ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಎಲ್ಲಾ ಘಟನೆಯ ಕುರಿತಂತೆ ಪೊಲೀಸರು ಪ್ರಕರಣಗಳು ಎಂದು ದಾಖಲಿಸಿಕೊಂಡಿದ್ದಾರೆ.