ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ನಾಲ್ಕು ಕುಟುಂಬ ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೆ ಒಳಗಾಗಿದೆ.
ತಮಗಾದ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಕಳೆದ 9 ವರ್ಷಗಳಿಂದ ನಾಲ್ಕು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ನಿವೇಶನ ವಿಚಾರವಾಗಿ ನಾಲ್ಕು ಕುಟುಂಬಗಳನ್ನು ಸಮುದಾಯದ ಮುಖಂಡರು ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಎಸ್. ಹೊಸಕೋಟೆಯಲ್ಲಿ ಈ ಬಹಿಷ್ಕಾರ ನಡೆದಿದೆ. ಗ್ರಾಮದ ಉಪ್ಪಾರ ಸಮುದಾಯದ ಮುಖಂಡರು ಸ್ವಜಾತಿಯವರಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ರೇವಮ್ಮ, ಮಾದಶೆಟ್ಟಿ ಕುಟುಂಬಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿ ಬಹಿಷ್ಕಾರ ಹಾಕಲಾಗಿದೆ.
ಗ್ರಾಮದಲ್ಲಿ ಯಾರು ಕೂಡ ಇವರನ್ನು ಕೆಲಸಕ್ಕೆ ಕರೆಯುವಂತಿಲ್ಲ. ಜೊತೆಗೆ ಯಾರು ಕೂಡ ಇವರನ್ನು ಮಾತನಾಡಿಸುವಂತಿಲ್ಲ. ಅಂಗಡಿಗಳಲ್ಲಿ ಪದಾರ್ಥಗಳನ್ನು ಕೊಡುವಂತಿಲ್ಲ. ಈ ಬಗ್ಗೆ ಈ ಕುಟುಂಬಗಳು ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು.
ಬಹಿಷ್ಕಾರದಿಂದ ಮುಕ್ತಿ ಕೊಡಿಸುವಲ್ಲಿ ನಂಜನಗೂಡು ತಾಲೂಕು ಆಡಳಿತ ವಿಫಲವಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದೇ ತಹಶೀಲ್ದಾರ್ ಬೇಜಾವ್ದಾರಿ ತೋರಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.