ನವದೆಹಲಿ: ನಿವೃತ್ತ ರಿಸರ್ವ್ ಬ್ಯಾಂಕ್ ಗವರ್ನರ್ (RBI) ಜನರಲ್ ರಘುರಾಮ್ ರಾಜನ್ (Raghuram Rajan) ರಾಜ್ಯಸಭೆಗೆ ಮಹಾರಾಷ್ಟ್ರದಿಂದ (Maharashtra) ಆಯ್ಕೆ ಆಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಜನವರಿ 31 ರಂದು ರಾಜನ್ ಅವರು ಶಿವಸೇನೆ(ಯುಬಿಟಿ) ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರ ಮಂಬೈ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮಹಾರಾಷ್ಟ್ರ ವಿಕಾಸ್ ಅಘಾಡಿ (MVA) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಎಂವಿಎ ಮೂಲಕ ರಾಜನ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮಾತುಕತೆ ನಡೆದಿದೆ ಎಂಬ ವಿಚಾರ ಈಗ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್ – ಆರೋಪ ಮಾಡಿದ್ದ ಕೇಜ್ರಿವಾಲ್ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್ ನೋಟಿಸ್
ಕಾಂಗ್ರೆಸ್ ರಘುರಾಮ್ ರಾಜನ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದೆ. ಇದರ ಭಾಗವಾಗಿ ಬೆಂಬಲ ಕೇಳಲು ರಾಜನ್ ಉದ್ಧವ್ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತದೆ.
ಮಹಾರಾಷ್ಟ್ರದಿಂದ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ 3 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯಸಭೆಗೆ ಆಯ್ಕೆಯಾಗಲು ಓರ್ವ ಅಭ್ಯರ್ಥಿಗೆ ಕನಿಷ್ಠ 42 ಮತಗಳ ಅಗತ್ಯವಿದೆ. ಪ್ರಸ್ತುತ ಕಾಂಗ್ರೆಸ್ 45 ಶಾಸಕರನ್ನು ಹೊಂದಿದೆ.
ರಘುರಾಮ್ ರಾಜನ್ ಅವರು ಯುಪಿಎ ಅವಧಿಯಲ್ಲಿ ಆರ್ಬಿಐ ಗವರ್ನರ್ ಆಗಿ ನೇಮಕಗೊಂಡಿದ್ದರು. 2013 ರಲ್ಲಿ ಅಧಿಕಾರ ಸ್ವೀಕರಿಸಿದ್ದ ಅವರು 2016ರಲ್ಲಿ ನಿವೃತ್ತರಾಗಿದ್ದರು.
ಈ ಹಿಂದೆ ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜನ್ ಚರ್ಚೆಗೆ ಗ್ರಾಸವಾಗಿದ್ದರು.