ವಿಜಯಪುರ: ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗ ಮಾಡಿಕೊಂಡು ವೈಯಕ್ತಿಕವಾಗಿ ಹೋದರೆ ಜನ ತೀರ್ಮಾನ ಮಾಡ್ತಾರೆ ಅಂತ ಜೆಡಿಎಸ್ ವರಿಷ್ಠ ನಾಯಕ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಎಸಿಬಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರತಿಕ್ರೆಯೆ ನೀಡಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯಕ್ಕೆ ಬಂದು ಹೋಗಿದ್ದು, ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಾಜಕಾರಣಿಗಳು ತಲೆ ಹಾಕಿದ್ದು ತಪ್ಪು. ರಾಜಕಾರಣಿಗಳಿಗೆ ಬೇರೆ ಕೆಲಸಗಳಿವೆ. ಅದನ್ನು ಮಠಾಧೀಶರು ತೀರ್ಮಾನ ಮಾಡುತ್ತಾರೆ ಎಂದರು.
ಜೆಡಿಎಸ್ ಪಕ್ಷದಲ್ಲಿ ಆರ್ಥಿಕವಾಗಿ ಬಲ ಇಲ್ಲ. ಜನರು ಕುಮಾರಸ್ವಾಮಿ ಪರವಾಗಿದ್ದಾರೆ. ಅವಕಾಶವನ್ನು ಕೊಡೋಣ ಅನ್ನೋ ಭಾವನೆ ಜನರಲ್ಲಿದೆ. ಯುವ ಪಡೆಯೊಂದಿಗೆ ಒಗ್ಗಟಾಗಿ ಹೋಗೋಣ ಅನ್ನೋ ವಿಚಾರವಿದೆ. ಕುಮಾರಸ್ವಾಮಿ ಅವರಿಗೆ ನಾನೇ ಒಂದು ಕಡೆಯಿಂದ ಸ್ಪರ್ಧೆ ಮಾಡಲು ಹೇಳಿದ್ದೇನೆ. ಬಂಡಾಯ ಶಾಸಕರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರೇ ಪಾಠ ಕಲಿಯಲಿದ್ದಾರೆ. ಮುಂದಿನ ಸಾರಿ ವಿಜಯಪುರಕ್ಕೆ ಬಂದಾಗ ಹೇಳ್ತೀನಿ ಎಂದರು.