ಅಭಿಷೇಕ್ (Abhishek Ambarish) ಮತ್ತು ಅವಿವಾ ವಿವಾಹಕ್ಕೆ (Marriage) ದೇವೇಗೌಡರ ಕುಟುಂಬದ ಯಾವ ಸದಸ್ಯರೂ ಬಂದಿರಲಿಲ್ಲ. ಅಭಿಷೇಕ್ ಗೆಳೆಯ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಮದುವೆಗೆ ಬಂದಿರಲಿಲ್ಲ. ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಇಲ್ಲ ಎನ್ನುವ ಮಾತಿದ್ದರೂ, ದೇವೇಗೌಡರ ಕುಟುಂಬ ಗೈರು ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿತ್ತು. ಇದೀಗ ದೇವೇಗೌಡ ಅವರ ಎಲ್ಲ ಮಾತಿಗೆ ಪೂರ್ಣವಿರಾಮ ಇಡುವ ಕೆಲಸ ಮಾಡಿದ್ದಾರೆ.
ಅಭಿಷೇಕ್ ಮತ್ತು ಅವಿವಾ (Aviva) ಮದುವೆ ಕಾರ್ಯಕ್ರಮಕ್ಕೆ ಶುಭಕೋರಿ ದೇವೇಗೌಡರು (H.D. Devegowda) ಪತ್ರವೊಂದನ್ನು ಬರೆದಿದ್ದು, ‘ಶ್ರೀಮತಿ ಸುಮಲತಾ (Sumalatha) ಅವರೇ, ನೀವು ಪ್ರೀತಿ ಪೂರ್ವಕ ಕಳುಹಿಸಿದ ನಿಮ್ಮ ಪುತ್ರನ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ನನಗೆ ತಲುಪಿದೆ. ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಅಭಿಷೇಕ್ ಹಾಗೂ ಅವಿವ ನವ ಮಧುಮಕ್ಕಳಿಗೆ ಶುಭಾಶೀರ್ವಾದಗಳನ್ನು ಕೋರುತ್ತೇನೆ. ಮಧು ಮಕ್ಕಳ ಭವಿಷ್ಯ ಬದುಕು ಸುಖವಾಗಿರಲಿ, ನೆಮ್ಮದಿಯಾಗಿರಲಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ’ ಎಂದು ಶುಭಾಶಯದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ನಟಿ ತಮನ್ನಾ ಹಾಟ್ ಫೋಟೋಗೆ ಸ್ವೀಟ್ 16 ಎಂದ ನೆಟ್ಟಿಗರು
ಈ ಹಿಂದೆ ಪ್ರಧಾನಿ ನರೇಂದ್ರ ಮೋಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಅಭಿ ಮದುವೆಗೆ ಶುಭ ಕೋರಿ ಪತ್ರಗಳನ್ನು ಕಳುಹಿಸಿದ್ದರು. ಇಳಿ ವಯಸ್ಸಿನ ಕಾರಣದಿಂದಾಗಿ ದೇವೇಗೌಡ ಅವರು ಮದುವೆಗೆ ಬಾರದೇ ಇದ್ದರೂ ಶುಭಾಶಯ ಪತ್ರವನ್ನು ಕಳುಹಿಸುವ ಮೂಲಕ ಅಭಿನಂದನೆಗೆ ಕಾರಣರಾಗಿದ್ದಾರೆ.
ದೇವೇಗೌಡ ಅವರ ಪತ್ರ ಹಾಗೂ ಅವರಿಗೆ ಆಹ್ವಾನಿಸಲು ಹೋಗಿದ್ದ ಫೋಟೋವನ್ನು ಸುಮಲತಾ ಅಂಬರೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅವರ ಮದುವೆಗೆ ಮತ್ತು ಆರತಕ್ಷತೆ ಸಮಾರಂಭಕ್ಕೆ ಶುಭ ಕೋರಿದ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಅಂಬರೀಶ್ ಅವರ ಕುಟುಂಬದಿಂದ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗೆ ನಿಮ್ಮ ಹಾರೈಕೆ, ಆಶೀರ್ವಾದ ಸದಾ ಹೀಗೆಯೇ ಇರಲಿ’ ಎಂದು ಬರೆದುಕೊಂಡಿದ್ದಾರೆ.