ಚಿಕ್ಕಮಗಳೂರು: ತೋಟಕ್ಕೆ ಹೋಗಿದ್ದ ಸಮಯದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹೆಜ್ಜೇನು ದಾಳಿಯಿಂದ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಜನತಾ ಪಕ್ಷ, ಬಿಜೆಪಿ-ಕಾಂಗ್ರೆಸ್ಸಿನ ಮಾಜಿ ಜಿಲ್ಲಾಧ್ಯಕ್ಷ ತೋಟದಲ್ಲೇ ಸಾವನ್ನಪ್ಪಿರೋ ಘಟನೆ ತಾಲೂಕಿನ ಕೃಷ್ಣಗಿರಿ ಎಸ್ಟೇನ್ನಲ್ಲಿ ನಡೆದಿದೆ. 73 ವರ್ಷದ ಎಂ.ಎಸ್.ಭೋಜೇಗೌಡ ಹೆಜ್ಜೇನು ದಾಳಿಯಿಂದ ವಿಧಿವಶರಾದವರು.
ಇಂದು(ಶನಿವಾರ) ಎಂದಿನಂತೆ ಭೋಜೇಗೌಡರು ತಾಲೂಕಿನ ಕೃಷ್ಣಗಿರಿಯಲ್ಲಿರುವ ತಮ್ಮ ತೋಟದಲ್ಲಿ ಮರಕಸಿ ಕೆಲಸ ನಡೆಯುತ್ತಿದ್ದ ಹಿನ್ನೆಲೆ ತೋಟಕ್ಕೆ ಹೋಗಿದ್ದರು. ತೋಟದಲ್ಲಿ ಸುತ್ತಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ತೋಟದಲ್ಲಿ ಓಡಾಡುತ್ತಿದ್ದ ವೇಳೆ ಸುಮಾರು ಸಾವಿರಕ್ಕೂ ಹೆಚ್ಚು ಜೇನು ಒಮ್ಮೆಲೆ ಭೋಜೇಗೌಡರ ಮೇಲೆ ದಾಳಿ ಮಾಡಿದ್ದರಿಂದ ತೋಟದಲ್ಲೇ ಅಸ್ವಸ್ಥರಾಗಿದ್ದರು. ತೋಟದಲ್ಲಿ ಅವರು ಬಿದ್ದಿರುವುದನ್ನ ಗಮನಿಸಿದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಭೋಜೇಗೌಡರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸ್ಮಶಾನದಲ್ಲಿ ಗುಂಡು, ತುಂಡು ಪಾರ್ಟಿ – ಸ್ನೇಹಿತರಿಂದಲೇ ಕೊಲೆಯಾದ ಯುವಕ
ಸಾವಿರಕ್ಕೂ ಹೆಚ್ಚು ಜೇನುಗಳು ದಾಳಿ ಮಾಡಿದ್ದರಿಂದ ಅವರು ಆಸ್ಪತ್ರೆಗೆ ಬರುವ ಮಾರ್ಗದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಭೋಜೇಗೌಡ ಅವರು ಎರಡು ಬಾರಿ ಕಾಫಿ ಮಂಡಳಿಯ ಅಧ್ಯಕ್ಷರಾಗಿ, ಕಾಫಿ ಬೆಳೆಗಾರರ ಅಭಿವೃದ್ಧಿಗೆ ಶ್ರಮಿಸಿದ್ದರು. ಮಳೆಯಿಂದ ಕಾಫಿ ನಷ್ಟವಾದಾಗ ಬೆಳೆಗಾರರ ಪರ ದನಿ ಎತ್ತಿ ಹೋರಾಡಿದ್ದರು. ಸರ್ಫೇಸಿ ಕಾಯ್ದೆ ವಿರುದ್ಧ ತಮ್ಮದೇ ರೀತಿ ಹೋರಾಟ ನಡೆಸಿದ್ದರು.
2ನೇ ಅವಧಿಗೆ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದ ಅವರ ಅಧಿಕಾರ ಇದೇ ಮಾರ್ಚ್ನಲ್ಲಿ ಕೊನೆಯಾಗಿತ್ತು. ರಾಜಕೀಯವಾಗಿಯೂ ಭೋಜೇಗೌಡ ಅಜಾತಶತ್ರುವಾಗಿ ಮೂರು ಪಕ್ಷದಲ್ಲಿ ಗೆಳೆಯರನ್ನು ಹೊಂದಿದ್ದರು. ಜನತಾ ಪಕ್ಷ-ಕಾಂಗ್ರೆಸ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಒಮ್ಮೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ರಾಜಕಾರಣ ಹಾಗೂ ವ್ಯಕ್ತಿಗತವಾಗಿಯೂ ಅಜಾತಶತ್ರುವಾಗಿದ್ದ ಭೋಜೇಗೌಡರ ಸಾವಿಗೆ ಜಿಲ್ಲೆಯ ಎಲ್ಲ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳಿಗೆ ಕಾಂಗ್ರೆಸ್ ಹೊಣೆ: ಆರ್.ಅಶೋಕ್