ಬೆಂಗಳೂರು/ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ (MUDA Scam)ಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ (ED) ದಾಳಿ ನಡೆಸಿದ ವೇಳೆ ನಾಪತ್ತೆಯಾಗಿದ್ದ ಮುಡಾದ ಮಾಜಿ ಆಯುಕ್ತ, ಐಎಎಸ್ ಅಧಿಕಾರಿ ದಿನೇಶ್ಕುಮಾರ್ (Dinesh Kumar) ಕೊನೆಗೂ ಪತ್ತೆಯಾಗಿದ್ದಾರೆ. ಶನಿವಾರವಾದ ಇಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಕಳೆದ ಅಕ್ಟೋಬರ್ 28ರಂದು ದಿನೇಶ್ ಕುಮಾರ್ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್ಮೆಂಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡಿ ಅಧಿಕಾರಿಗಳ ದಾಳಿಯ ವೇಳೆ ವಾಕಿಂಗ್ಗೆ ತೆರಳಿದ್ದ ದಿನೇಶ್ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಅದರಂತೆ ಶನಿವಾರ ಸಂಜೆ ವಿಚಾರಣೆ ಎದುರಿಸಿ ಮನೆಗೆ ಹೊರಟಿದ್ದಾರೆ. ಸದ್ಯ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ: ಮುಡಾದ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಬಿಡುಗಡೆ – ಒಬ್ಬೊಬ್ಬರಿಗೆ 20ರಿಂದ 25 ಸೈಟ್ ಹಂಚಿಕೆ