– ಜನರ ತೆರಿಗೆ ದುಡ್ಡಲ್ಲಿ 2,000 ಕೊಟ್ಟು ನಾನೇ ಕೊಟ್ಟೆ ಅಂತ ಯಾಕೆ ಹೇಳ್ತೀರಾ?
– ಸಿದ್ದರಾಮಯ್ಯನಹುಂಡಿಯಲ್ಲಿ ಚಿನ್ನದ ಕಬ್ಬು ಬೆಳೆದು, ಅದರ ದುಡ್ಡಿಂದ ಜನರಿಗೆ ಕೊಡ್ತಿದ್ದೀರಾ ಅಂತ ಪ್ರಶ್ನೆ
ಮೈಸೂರು: ಜನರು ಪ್ರಧಾನಿ ಮೋದಿಗೆ ಕ್ರೆಡಿಟ್ ಕೊಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ ಎಂದು ಕಾಂಗ್ರೆಸ್ ನಾಯಕರನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡರು.
ಯುದ್ಧದ ಕ್ರೆಡಿಟ್ ಸೈನಿಕ್ಕೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜನರ ತೆರಿಗೆ ದುಡ್ಡಲ್ಲಿ 2 ಸಾವಿರ ಕೊಟ್ಟು ನಾನೇ ಕೊಟ್ಟೆ ನಾನೇ ಕೊಟ್ಟೆ ಅಂಥ ಯಾಕೆ ಹೇಳ್ತೀರಾ? ಅದರ ಕ್ರೆಡಿಟನ್ನು ತೆರಿಗೆದಾರರಿಗೆ ಯಾಕೆ ಕೊಡಲ್ಲ? ಸಿದ್ದರಾಮಯ್ಯನಹುಂಡಿಯಲ್ಲಿ ಚಿನ್ನದ ಅಲೂಗಡ್ಡೆ, ಚಿನ್ನದ ಕಬ್ಬು ಬೆಳೆದು ಅದರಲ್ಲಿ ಬಂದ ದುಡ್ಡನ್ನ ಜನಕ್ಕೆ ಕೊಡುತ್ತೀದ್ದೀರಾ? ನನ್ನ ಹೆಂಡ್ತಿಗೂ, ಮಹಾದೇವಪ್ಪ ಹೆಂಡ್ತಿಗೂ ಫ್ರೀ ಅಂತೀರಲ್ಲ, ಆ ಫ್ರೀಗೆ ದುಡ್ಡು ಕೊಟ್ಟಿದ್ದು ಯಾರು? ಎಲ್ಲದಕ್ಕೂ ನಾನೇ ನಾನೇ ಕೊಟ್ಟಿದ್ದು ಅಂಥ ಯಾಕೆ ಕೊಚ್ಚಿ ಕೊಳ್ತೀರಾ ಎಂದು ಕಿಡಿಕಾರಿದರು.
ಯುದ್ಧ ಕ್ರೆಡಿಟ್ ಸೈನಿಕರಿಗೆ ಸಿಗಬೇಕು. ಆದರೆ, ಜನ ಮೋದಿಯಂಥ ಗಟ್ಟಿ ನಾಯಕತ್ವಕ್ಕೆ ಅದರ ಕ್ರೆಡಿಟ್ ಕೊಡ್ತಿದ್ದಾರೆ ಅಷ್ಟೇ. ಹಿಂದೆ ಇಂದಿರಾ ಗಾಂಧಿಗೂ ಕ್ರೆಡಿಟ್ ಕೊಡಲಿಲ್ವಾ? ಇಂದಿರಾ ಗಾಂಧಿ ಸಮಯದಲ್ಲಿ ಯುದ್ಧ ಸೋತಾಗ ಇಂದಿರಾ ಗಾಂಧಿನ ಬೈಯಲಿಲ್ವಾ? ಇದೆಲ್ಲಾ ಜನ ಕೊಡುವ ಕ್ರೆಡಿಟ್ಗಳು. ಜನ ಮೋದಿಗೆ ಕ್ರೆಡಿಟ್ ಕೊಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಮುಂಬೈ ದಾಳಿಯಾದಾಗ ಅವತ್ತಿನ ಯುಪಿ ಸರ್ಕಾರ ಯಾಕೆ ದಾಳಿ ಮಾಡಲಿಲ್ಲ? ಇವತ್ತು ಸೈನಿಕರಿಗೆ ಸ್ವಾತಂತ್ರ್ಯ ಆ ಶಕ್ತಿಯನ್ನ ಮೋದಿ ಕೊಟ್ಟಿದ್ದಾರೆ. ಅದೇ ನಿಜವಾದ ನಾಯಕತ್ವ. ನೀವು ಮಾಡಲು ಆಗದ್ದನ್ನು ಮೋದಿ ಮಾಡಿದ್ದಾರೆ ಅಷ್ಟೇ ಎಂದು ಗುಡುಗಿದರು.