ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಕೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆ ಹಿಡುಕ ಎಂದು ಗೌರಿಬಿದನೂರು ಶಾಸಕ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಶಿವಶಂಕರರೆಡ್ಡಿ, ಅನರ್ಹ ಶಾಸಕ ಸುಧಾಕರ್ ವಿರುದ್ಧ ಹರಿಹಾಯ್ದರು. ರಾಜಕೀಯ ಕ್ಷೇತ್ರದಲ್ಲಿ ಯಾರನ್ನೇ ಕೇಳಿ ಸುಧಾಕರ್ ಬಗ್ಗೆ ಬ್ರೋಕರ್ ಎಂದು ಕರೆಯುತ್ತಾರೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ. ಈಗಲೂ ಅದೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದ ಸುಧಾಕರ್ ಹಣ ಲೂಟಿ ಹೊಡೆಯುತ್ತಿದ್ದಾರೆ. ಪೇರೇಸಂದ್ರ ಸ್ವಗ್ರಾಮದಲ್ಲಿ ಸುಧಾಕರ್ ಕಟ್ಟಿರುವ ಶಾಲೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಮಾಡಿರುವ ಬೇನಾಮಿ ಆಸ್ತಿಯೇ ಇದಕ್ಕೆ ಸಾಕ್ಷಿ. ಬೆಂಗಳೂರಿನ ಸದಾಶಿವನಗರದಲ್ಲಿ ಸ್ವತಃ ಸಿದ್ದರಾಮಯ್ಯನವರಿಗೆ ಮನೆ ಕಟ್ಟಲು ಆಗಲಿಲ್ಲ. ಆದರೆ ಸುಧಾಕರ್ 50 ಕೋಟಿ ರೂ.ಯಲ್ಲಿ ಮನೆ ಕಟ್ಟಿದ್ದಾರೆ. ಸುಧಾಕರ್ ಏನು ಬೇಸಾಯ ಮಾಡಿದ್ರಾ, ಇಲ್ಲ ಅವರಪ್ಪ ಉಳುಮೆ ಮಾಡ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿನ ಜಲ್ಲಿ ಕ್ರಷರ್ ಮಾಲೀಕರಿಂದ ತಲಾ ಒಂದು ಕ್ರಷರ್ ಗೆ ಪ್ರತಿ ತಿಂಗಳು 2 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ತಿಂಗಳಿಗೆ 2 ಕೋಟಿ ಅಷ್ಟು ಹಣ ವಸೂಲಿ ಮಾಡುತ್ತಿದ್ದು, ಭೂಪರಿವರ್ತನೆಗೆ ಎಕರೆಗೆ 8 ಲಕ್ಷ ರೂ. ವರೆಗೂ ಹಣ ಪಡೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಈಗಿನ ರಾಜಕಾರಣದಲ್ಲಿ ಪಕ್ಷಗಳನ್ನು ಬದಲಾಯಿಸೋದು ಸಾಮಾನ್ಯ. ಆದರೆ ಪಕ್ಷಗಳಿಗೆ ನಿಷ್ಠೆಯಿಂದ ಇರಬೇಕಾಗುತ್ತೆ. ಪಕ್ಷ ಸಂಕಷ್ಟದಲ್ಲಿ ಇದ್ದಾಗ ಪಕ್ಷಕ್ಕೆ ಕೈ ಕೊಟ್ಟು ದ್ರೋಹ ಬಗೆದ ಸುಧಾಕರ್ ಗೆ ಉಪಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಂಗ್ ನೀಡಿದರು.