ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೆಟ್ಟ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಜೊತೆಗೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದ್ದರು ಕೂಡ ಪ್ರತಿಕ್ರಿಯಿಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಕೇವಲ ಬಿಜೆಪಿ ಸರ್ಕಾರವನ್ನು ಹೊಗಳುವುದೇ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ.
ಜನರನ್ನು ಪ್ರಚೋದನೆ ಮಾಡುವುದು ಇವರ ಕೆಲಸವಾಗಿದೆ. ಮೋದಿ, ಮೋದಿ ಎನ್ನುವ ಇವರು ಮೋದಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಸೈನಿಕ ಸಾವನ್ನಪ್ಪಿಲ್ಲವೇ ಎಂದು ಚಕ್ರವರ್ತಿ ಸೂಲಿಬೆಲೆಗೆ ಪ್ರಶ್ನಿಸಿದ್ದಾರೆ. ಅನಂತ್ ಕುಮಾರ್ ಅವರಂತಹ ದಿಟ್ಟ ನಾಯಕನ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಂದ ತೇಜಸ್ವಿ ಸೂರ್ಯ ಏನಾದರೂ ಸಾಧಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಈರುಳ್ಳಿ ಬೆಲೆ ಗಗನಕ್ಕೇರಿದ್ದರು ತುಟಿ ಬಿಚ್ಚದ ಸಂಸದರು ಇವರು ಎಂದು ಟೀಕಿಸಿದ್ದಾರೆ.
ಇದೇನಾ ಮೋದಿಯವರ ಅಚ್ಚೇದಿನ್, ನಿಮ್ಮದು ಉತ್ತಮ ಸರ್ಕಾರನಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮದು ಕೂಡ ದರಿದ್ರ ಸರ್ಕಾರನೇ ಎಂದು ಬೇಳೂರು ಹೇಳಿದ್ದಾರೆ. ಇನ್ನು ನಲಪಾಡ್ ಅಪಘಾತ ಮಾಡಿದರೆ ಜೈಲಿಗೆ ಹಾಕಿ ಎನ್ನುವ ಇವರು ಸಚಿವ ಆರ್. ಅಶೋಕ್ ಪುತ್ರ ಅಪಘಾತ ಮಾಡಿದರೆ ಏನು ಹೇಳುತ್ತಾರೆ. ಅಶೋಕ್ ಮತ್ತು ಸಿ.ಟಿ. ರವಿ ಈಗೇನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.