ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯವರ ನೆಮ್ಮದಿ ಹಾಳು ಮಾಡಿರುವ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇದೀಗ ಕನಕಪುರ, ಬೆಂಗಳೂರಿನವರ ನೆಮ್ಮದಿ ಹಾಳು ಮಾಡಲು ಅಲ್ಲಿಗೆ ಹೋಗಿದ್ದಾರೆ. ಅವರನ್ನಾದರೂ ಶಾಂತಿ, ನೆಮ್ಮದಿಯಲ್ಲಿರಲು ಬಿಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಅವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಸು ಪ್ರತಿಮೆ ವಿರೋಧಿಸಿ ಕಲ್ಲಡ್ಕ ಪ್ರಭಾಕರ ಭಟ್ ಕನಕಪುರ ಚಲೋ ನಡೆಸಿರುವ ವಿಚಾರವನ್ನು ಖಂಡಿಸಿದ ಅವರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವೆಲ್ಲ ನರಕ ಅನುಭವಿಸುತ್ತಿರೋದು ಸಾಕು. ಇನ್ನು ಇಲ್ಲಿಂದ ಕನಕಪುರಕ್ಕೆ ಹೋಗಿ ಅಲ್ಲಿ ಉದ್ರೇಕಕಾರಿ ಭಾಷಣ ಮಾಡಿ ಅಲ್ಲಿಯ ಜನರ ನೆಮ್ಮದಿ ಹಾಳು ಮಾಡೋದು ಬೇಡ. ಕಲ್ಲಡ್ಕ ಭಟ್ರಿಗೆ ಇಲ್ಲಿಂದ ಅಲ್ಲಿ ಹೋಗಿ ಭಾಷಣ ಮಾಡುವ ಅಗತ್ಯ ಇರಲಿಲ್ಲ. ಇದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಅತೀ ಸಣ್ಣ ಮನಸ್ಸನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ದೇವರ ಪ್ರತಿಮೆ ಮಾಡಲು ಅಡ್ಡಿ ಮಾಡುವ ಇವರ ಮನೋಭಾವಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದ ಅವರು, ಶಾಂತಿ ಸಂದೇಶ ಸಾರಲು ಏಸು ಪ್ರತಿಮೆ ನಿರ್ಮಿಸಲಾಗುತ್ತಿದೆ. ಕ್ರೈಸ್ತ ಸಮುದಾಯವರ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಸಮಾಜಕ್ಕೆ ಪೂರಕವಾಗಿದೆ. ಕ್ರೈಸ್ತ ಸಮುದಾಯವರು ಯಾವುದನ್ನೂ ಮಿಸ್ ಯೂಸ್ ಮಾಡೋದಿಲ್ಲ ಎಂದರು. ಇದನ್ನೂ ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ
ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡೋದಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಅಲ್ಲಿನ ಸೋದರತೆ ಹಾಳು ಮಾಡುವ ಉದ್ದೇಶದಿಂದ ಹೋಗಿದ್ದಾರೆ ಎಂದು ಖಾದರ್ ಅವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ