ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇತ್ತೀಚೆಗಷ್ಟೇ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ಕುರಿಗಳನ್ನು ಖರೀದಿಸಿದ್ದರು. ಇದರ ಬೆನ್ನೆಲ್ಲೇ ಅವರು ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಕುರಿಗಳನ್ನು ಖರೀದಿಸಿದ್ದಾರೆ.
ರಮೇಶ್ ಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಆಗಮಿಸಿದ್ದರು. ಪ್ರತಿ ಶುಕ್ರವಾರ ಕರ್ನಾಟಕ- ಆಂಧ್ರ ಗಡಿಭಾಗದಲ್ಲಿ ಅಂಚಿನಲ್ಲಿರುವ ಚೇಳೂರಿನಲ್ಲಿ ಕುರಿ-ಮೇಕೆಗಳ ಮಾರಾಟದ ಸಂತೆ ಬಲು ಜೋರಾಗಿ ಸಾಗುತ್ತದೆ. ಇದರಿಂದ ನೆರೆಯ ಆಂಧ್ರದ ರೈತರು ಕುರಿ ಮೇಕೆಗಳ ಜೊತೆಗೆ ಸಂತೆಗೆ ಆಗಮಿಸುತ್ತಾರೆ.
ಇಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಈ ಸಂತೆಗೆ ಭೇಟಿ ನೀಡಿದ್ದು, ಅವರ ಕಡೆಯವರು ಕುರಿಗಳ ಖರೀದಿಯಲ್ಲಿ ತೊಡಗಿದರು. ರಮೇಶ್ ಕುಮಾರ್ ಕಂಡ ರೈತರಿಗೆ ಒಂದು ಕಡೆ ಅಚ್ಚರಿ ಆದರೆ ಮತ್ತೊಂದು ಕಡೆ ಸಂತಸ. ಮಾಜಿ ಸ್ಪೀಕರ್, ಶಾಸಕ, ಮಂತ್ರಿಗಳಾಗಿದ್ದವರು ಕುರಿ ಖರೀದಿಸಲು ಬಂದವರಲ್ಲ ಎಂದು ಅಚ್ಚರಿಪಟ್ಟರು.
ರಮೇಶ್ ಕುಮಾರ್ ಎಷ್ಟು ಸರಳ ವ್ಯಕ್ತಿ ಎಂದು ರೈತರು ಅವರ ಜೊತೆ ಮಾತಿನಲ್ಲಿ ನಿರತರಾಗಿದರು. ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂದು ಕೆಲ ರೈತರು ಮಾತನಾಡುತ್ತಿದ್ದರು.