ಚಿಕ್ಕೋಡಿ(ಬೆಳಗಾವಿ): ಮಾಜಿ ಸಿ.ಎಂ ಸಿದ್ದರಾಮಯ್ಯ ಇಂದಿಗೂ ನನ್ನ ನಾಯಕ ಹಾಗೂ ಗುರು. ಆದರೆ ಇತ್ತೀಚಿಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಯವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕ, ಗುರು. ಆದರೆ ಇತ್ತೀಚಿಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿತ್ತಿದ್ದಾರೆ. ನಿನ್ನೆ ರಾಯಬಾಗದಲ್ಲಿ ಸಿದ್ದರಾಮಯ್ಯ ನವರು ವಿವೇಕರಾವ ಪಾಟೀಲಗೂ ಕಾಂಗ್ರೆಸ್ ಪಕ್ಷಕೂ ಸಂಬಂದವಿಲ್ಲ ಎಂದರು.
ನಾನು ಕೋಲ್ಹಾಪೂರ ಮಹಾಲಕ್ಷ್ಮಿ ದೇವಿಯ ಮೇಲೆ ಆಣೆ ಮಾಡಿ ಹೇಳ್ತೀನಿ. ವಿವೇಕರಾವ್ ಪಾಟೀಲ್ ಕಾಂಗ್ರೆಸ್ ಪಕ್ಷದ ಸದಸ್ಯರು. ಕಳೆದ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿವೇಕರಾವ್ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೂಡುವಂತೆ ಕೇಳಿಕೊಂಡಿದ್ದೆ. ಆದರೆ ವೀರಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ನೀಡಿದರು.
ವಿವೇಕರಾವ್ ಪಾಟೀಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದರು. ನಂತರ ಸಿದ್ದರಾಮಯ್ಯನವರು ವಿವೇಕರಾವ್ ಪಾಟೀಲ್ ಗೆ ನಮ್ಮ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವಂತೆ ನನ್ನ ಬಳಿ ಹೇಳಿದ್ದರು. ಆದರೆ ವಿವೇಕರಾವ್ ಪಾಟೀಲ್ಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.