ಮಂಗಳೂರು: ಕಾರಿನಲ್ಲೇ ದಿನವಿಡೀ ಓಡಾಟ ಮಾಡುತ್ತಿದ್ದ ಮಾಜಿ ಸಚಿವ ರಮಾನಾಥ ರೈ ಇಂದು ಮಾತ್ರ ಖಾಸಗಿ ಬಸ್ಸಿನಲ್ಲಿ ಇತರ ಪ್ರಯಾಣಿಕರೊಂದಿಗೆ ಪ್ರಯಾಣ ಬೆಳೆಸಿದರು.
ಮಾಜಿ ಸಚಿವ ರಮಾನಾಥ ರೈ ತಮ್ಮ ಊರು ಬಂಟ್ವಾಳದಿಂದ ಖಾಸಗಿ ಸಾರಿಗೆ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸಿ, ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಮಂಗಳೂರಿನ ಗೋಲಿಬಾರ್ ಘಟನೆ ಖಂಡಿಸಿ, ಮಂಗಳೂರಿನ ಪುರಭವನದ ಮುಂಭಾಗದಲ್ಲಿ ಒಂದು ದಿನದ ಧರಣಿ ನಡೆಸಲಾಗುತ್ತಿದೆ. ಈ ವೇಳೆ, ಧರಣಿಯಲ್ಲಿ ಪಾಲ್ಗೊಳ್ಳಲು ರಮಾನಾಥ ರೈ ಮಂಗಳೂರಿಗೆ ಬಸ್ಸಿನಲ್ಲಿ ಆಗಮಿಸಿ ಗಮನ ಸೆಳೆದರು.
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಬಸ್ ಹತ್ತಿ ಕುಳಿತ ರಮಾನಾಥ ರೈ ಅವರು ಯಾವುದೇ ಭದ್ರತೆ ಇಲ್ಲದೆ ಜನಸಾಮಾನ್ಯರ ಜೊತೆ ಪ್ರಯಾಣ ಮಾಡಿದರು. ಸಚಿವರಾಗಿದ್ದ ವೇಳೆ ಸದಾ ಬ್ಯುಸಿಯಾಗಿರುತ್ತಿದ್ದ ರಮಾನಾಥ ರೈ, ಈಗಲೂ ಬ್ಯುಸಿ. ಆದರೆ ಸೋತರೂ ಜನಸಾಮಾನ್ಯರ ಜೊತೆಗಿದ್ದೇನೆ ಎನ್ನುವುದನ್ನು ಬಸ್ಸಿನಲ್ಲಿ ಓಡಾಡುವ ಮೂಲಕ ಪರೋಕ್ಷವಾಗಿ ತೋರಿಸಿದ್ದಾರೆ.