ಚಿಕ್ಕೋಡಿ(ಬೆಳಗಾವಿ): ಮಾಜಿ ಸಚಿವ ಮಲ್ಲಾರಿಗೌಡ ಶಂಕರ್ ಪಾಟೀಲ್ ವಿಧಿವಶರಾಗಿದ್ದಾರೆ.
ಸಂಕೇಶ್ವರ ವಿಧಾನಸಭಾ ಮತ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಲ್ಲಾರಿಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಸ್ವಂತ ಊರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಮನೆಯಲ್ಲಿ ಮಲ್ಲಾರಿಗೌಡ ಪಾಟೀಲ್ ಕೊನೆಯುಸಿರು ಎಳೆದಿದ್ದಾರೆ.
ಕಾಂಗ್ರೇಸ್ ಪಕ್ಷದ ಶಾಸಕರಾಗಿ ಒಂದು ಬಾರಿ ಬೃಹತ್ ನೀರಾವರಿ ಇಲಾಖೆಯ ಸಚಿವರಾಗಿ ಮಲ್ಲಾರಿಗೌಡ ಪಾಟೀಲ್ ಕಾರ್ಯ ನಿರ್ವಹಿಸಿದ್ದರು. ಸಂಕೇಶ್ವರ ಪಟ್ಟಣದ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರ ಜರುಗಿದೆ.
ಹುಕ್ಕೇರಿ ತಾಲೂಕಿಗೆ ವಿವಿಧ ನೀರಾವರಿ ಯೋಜನೆಗಳನ್ನ ಜಾರಿ ಮಾಡಿ ಈ ಭಾಗದ ನೀರಾವರಿ ಹರಿಕಾರ ಎಂದು ಮಲ್ಲಾರಿಗೌಡ ಪಾಟೀಲ್ ಗುರುತಿಸಿಕೊಳ್ಳುತ್ತಿದ್ದರು. ಹಿಡಕಲ್ ಜಲಾಶಯದಿಂದ ಅನೇಕ ಕುಡಿಯುವ ನೀರಿನ ಯೋಜನೆಗಳನ್ನ ಮಲ್ಲಾರಿಗೌಡ ಜಾರಿಗೆ ತಂದಿದ್ದರು.