ಹಾಸನ: ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಬಾಗಿಲು ಮುಚ್ಚಿ, ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಲಿ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದ ಕಾಂಗ್ರೆಸ್ ಈಗಿಲ್ಲ. ಕೋಮುವಾದಿ ಜೊತೆ ಹೋಗಲ್ಲ ಅಂತ ಮಂಡ್ಯದಲ್ಲಿ ಕುಮಾರಣ್ಣನ ಮಗನನ್ನು ತೆಗೆದ್ರು. ತುಮಕೂರಿನಲ್ಲಿ ಕೋಮುವಾದಿ ಪಕ್ಷದ ಜೊತೆ ಸೇರಿ ದೇವೇಗೌಡರನ್ನ ಸೋಲಿಸಿದ್ರು ಎಂದರು. ಇದನ್ನೂ ಓದಿ: ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್
ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಎಂತಹ ಸ್ಥಿತಿ ತಂದರು. ಕಾಂಗ್ರೆಸ್ ನವರು ಕಾಂಗ್ರೆಸ್ ನವರನ್ನೇ ಸೋಲಿಸುತ್ತಾರೆ. 2023 ರ ಚುನಾವಣೆಯಲ್ಲೂ ಕಾಂಗ್ರೆಸ್ ನವರನ್ನ ಕಾಂಗ್ರೆಸ್ ನವರೇ ಸೋಲಿಸುತ್ತಾರೆ. ಕಾಂಗ್ರೆಸ್ ಗೆ ಇಂತಹ ಸ್ಥಿತಿ ಬಂತಲ್ಲಪ್ಪ ಅಂತ ನನಗೆ ವ್ಯಥೆ ಆಗ್ತಿದೆ ಎಂದು ವ್ಯಂಗ್ಯವಾಡಿದ್ರು.
ಇದೇ ವೇಳೆ ಜೆಡಿಎಸ್ ಪಕ್ಷ ತೊರೆಯುತ್ತಿರುವವರ ಬಗ್ಗೆ ಮಾತನಾಡಿ, ಜೆಡಿಎಸ್ ಪಕ್ಷ ತೊರೆದು ಹೋಗುವವರು ಹೋಗಲಿ, ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.