ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ನಾಯಕರು ಭ್ರಷ್ಟ ಸರ್ಕಾರ, ಭ್ರಷ್ಟ ಸರ್ಕಾರ ಅಂತ ಬರೀ ಭಾಷಣ ಮಾಡ್ತಾರೆ. ಚುನಾವಣೆಗೆ ಇನ್ನೂ 15 ದಿನಗಳ ಕಾಲವಿದ್ದು, ಮೋದಿಯವರೇ ಗಂಡಸ್ತನ ಇದ್ದರೆ ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾಡುವ ಒಂದಾದ್ರೂ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಬಹಿರಂಗ ಸವಾಲು ಹಾಕಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬೇಡಿಕಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೋದಿ ಅವರು ಸಿದ್ದರಾಮಯ್ಯರ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಶಪಥ ಮಾಡಿದ್ರು.
ಹತ್ತು ಪೆರ್ಸೆಂಟ್ ಆರೋಪ ನಿಮಗೆ ಶೋಭೆ ತರಲ್ಲ. ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು, 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 800 ರೂ. ಆಗಿದೆ. ಬದಾಮಿಯಲ್ಲಿ ಸಿಎಂ ಗೆಲುವು ನಿಶ್ಚಿತವಾಗಿದೆ. 5 ವರ್ಷ ಕೂಲಿ ಮಾಡಿದ್ದೇವೆ ನಮಗೆ ಆಶೀರ್ವಾದ ಮಾಡಿ, ಮುಂದೆ ರಾಹುಲ್ ಗಾಂಧಿ ಪ್ರಧಾನಿ ಆಗುವುದು ಸಹ ನಿಶ್ಚಿತ. ಮೋದಿ ಅವರ ಮನೆಯಲ್ಲಿ ಯಾರಾದರೂ ದೇಶಕ್ಕಾಗಿ ಸತ್ತಿದ್ದಾರಾ? ಆದರೆ ಗಾಂಧೀ ಕುಟುಂಬದವರು ದೇಶಕ್ಕಾಗಿ ಸಾವನ್ನಪ್ಪಿದ್ದಾರೆ. ಬಿಜೆಪಿ ಅವರು ಯಾರಾದರೂ ದೇಶಕ್ಕಾಗಿ ಸಾವನ್ನಪ್ಪಿದ್ದಾರಾ ಎಂದು ಪ್ರಶ್ನಿಸಿದ್ರು.