ಬೆಂಗಳೂರು: ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದಾರೆ.
ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಎಚ್. ಎಂ ರೇವಣ್ಣ ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆ. ರೇವಣ್ಣ ಅವರು ಮಹಾಲಕ್ಷ್ಮಿ ಲೇಔಟ್ನ 141 ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಎಚ್. ಎಂ ರೇವಣ್ಣ, “ನಂಗೆ ಸ್ಪೈನಲ್ ಕಾರ್ಡ್ ತೊಂದರೆ ಇದೆ. ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಮತದಾನ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಚಿಕಿತ್ಸೆ ನಡುವೆ ಮತದಾನಕ್ಕೆ ಬಂದೆ. ಯಾರು ಕೂಡ ಮತದಾನ ಮಾಡೋದನ್ನು ತಪ್ಪಿಸಿಕೊಳ್ಳಬಾರದು. ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ವೋಟ್ ಮಾಡದೇ ಇದ್ದರೆ ತಪ್ಪಾಗುತ್ತೆ” ಎಂದರು.
ನಗರದ ಜನಕ್ಕಿಂತ ಹಳ್ಳಿ ಜನರು ಹೆಚ್ಚಾಗಿ ವೋಟ್ ಮಾಡುತ್ತಿದ್ದಾರೆ. ನಗರದ ಜನರು ಹೆಚ್ಚು ವೋಟ್ ಮಾಡಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.