ಎಚ್‍ಡಿಕೆಯ ವೋಟ್ ಹಾಕಿಲ್ಲ ಹೇಳಿಕೆ ಅಪ್ರಬುದ್ಧ: ಬಸವರಾಜ ರಾಯರೆಡ್ಡಿ

Public TV
2 Min Read
Basavaraj rayareddy hd kumarasswamy

ಬೆಂಗಳೂರು: ಉತ್ತರ ಕರ್ನಾಟಕದ ಜನ ವೋಟ್ ಹಾಕಿಲ್ಲ ಅನ್ನೋ ಸಿಎಂ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಚಿವ ರಾಯರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೋಟ್ ಹಾಕಿಲ್ಲ ಎನ್ನುವ ಹೇಳಿಕೆ ಅಪ್ರಬುದ್ಧ ಹೇಳಿಕೆ. ಅಂತಹ ಹೇಳಿಕೆ ಸಿಎಂ ಮಾತಾಡಿದ್ರೆ ಅ ಮಾತನ್ನು ಸಿಎಂ ವಾಪಸ್ ತೆಗೆದುಕೊಳ್ಳಬೇಕು ಎಂದರು.

ಉತ್ತರ ಕರ್ನಾಟಕಕ್ಕೆ ಸಚಿವರು ಕಡಿಮೆ ಇದೆ. ಪಕ್ಷದ ಅಧ್ಯಕ್ಷರು, ಸಿಎಂ, ಡಿಸಿಎಂ, ಹೆಚ್ಚು ಸಚಿವರು ದಕ್ಷಿಣ ಭಾಗದಲ್ಲೇ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕಕ್ಕೆ ಹೆಚ್ಚು ನೀಡಬೇಕು. ಉತ್ತರ ಕರ್ನಾಟಕದ ಬಗ್ಗೆ ಉತ್ತಮವಾಗಿ ಮಾತಾಡೋದನ್ನು ಸಿಎಂ ಕಲಿಯಬೇಕು ಎಂದರು.

ಕೆಲ ಮಠಾಧೀಶರು, ಸಂಘಟನೆಗಳ ಸದಸ್ಯರು ಉತ್ತರ ಕರ್ನಾಟಕ ಬಂದ್ ಮಾಡುತ್ತಿದ್ದಾರೆ. ಇದೊಂದು ಅಧರ್ಮದ ಕೆಲಸ. ಬಂದ್ ಮಾಡಿ ಅಖಂಡ ಕರ್ನಾಟಕ ಒಡೆಯಬೇಡಿ. ನೆಗಡಿ ಬಂದ್ರೆ ಮೂಗು ಕೊಯ್ದರೆ ಆಗುತ್ತಾ? ಉತ್ತರ ಕರ್ನಾಟಕ ಇಬ್ಬಾಗ ಮಾಡಿದ್ರೆ ಮೂಗು ಕೊಯ್ದ ರೀತಿ ಆಗುತ್ತೆ. ಬಂದ್ ಕರೆ ರಾಜಕೀಯ ಪ್ರೇರಿತ. ಕೆಲವೊಂದು ಗೊಂದಲ ಇರಬಹುದು. ಅದನ್ನು ನಿವಾರಣೆ ಮಾಡಲು ಸಿಎಂಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಜನರು ಕೂಡಾ ಬಂದ್ ಗೆ ಬೆಂಬಲ ನೀಡಬಾರದು. ಶ್ರೀರಾಮಲು, ಉಮೇಶ್ ಕತ್ತಿ ಇಂತಹ ಕೆಲಸಕ್ಕೆ ಹೋಗಬಾರದು. ರಾಜಕೀಯಕ್ಕೆ ಇಬ್ಬಾಗದ ಮಾತನ್ನು ಯಾರೂ ಆಡಬಾರದು. ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ. ಸಿದ್ದರಾಮಯ್ಯ ಬಜೆಟ್ ನ ಮುಂದುವರಿದ ಭಾಗವಾಗಿದ್ದು, ಯೋಜನೆ ತಯಾರು ಮಾಡೋವಾಗ ಎಲ್ಲ ಭಾಗ ನೋಡಿ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಾನು ಮತ್ತೆ ಭತ್ಯೆ ವಾಪಸ್ ನೀಡುವಂತೆ ಕೇಳಿದ್ದು ಯಾಕೆ: ಕಾರಣ ತಿಳಿಸಿದ ಬಸವರಾಜ ರಾಯರೆಡ್ಡಿ

RMG HD KUMARASWAMY

ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ಜೆಡಿಎಸ್ ಕೆಲ ಜಿಲ್ಲೆಯಲ್ಲಿ ಪ್ರಾಬಲ್ಯ ಇದೆ. ಮತ ಒಡೆದು ಹೋಗಬಾರದು ಅನ್ನೋದು ನಮ್ಮ ಚಿಂತನೆ. ಹೀಗಾಗಿ ಮೈತ್ರಿ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.

ಸಚಿವ ಜಿಟಿ ದೇವೇಗೌಡ ಸಿಂಡಿಕೇಟ್ ಸದಸ್ಯರ ನೇಮಕಾತಿ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರ್ಹ ವ್ಯಕ್ತಿಗಳನ್ನ ಸಿದ್ದರಾಮಯ್ಯ ನೇಮಕ ಮಾಡಿದ್ದರು. ಆದರೆ ಉನ್ನತ ಶಿಕ್ಷಣ ಸಚಿವರಾದ ಜಿಟಿ ದೇವೇಗೌಡ ಅವರು ಅರ್ಹರಿಲ್ಲದವರನ್ನ ನೇಮಕ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಚಿವರ ಹೇಳಿಕೆ ಸರಿಯಲ್ಲ. ಸಚಿವರು ವಿಷಯವನ್ನ ತಿಳಿದುಕೊಂಡು ಮಾತನಾಡಬೇಕು. ಒಬ್ಬೇ ಒಬ್ಬ ಅನರ್ಹ ವ್ಯಕ್ತಿಗಳನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಕೆಲವೊಬ್ಬರು ರಾಜಕೀಯ ವ್ಯಕ್ತಿಗಳ ನೇಮಕ ಆಗಿರಬಹುದು. ಉಳಿದಂತೆ ಅರ್ಹರನ್ನೆ ನೇಮಕ ಮಾಡಲಾಗಿದೆ. ಸಚಿವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿ ಟಾಂಗ್ ನೀಡಿದರು.

https://www.youtube.com/watch?v=ets0C4vasfM

Share This Article
Leave a Comment

Leave a Reply

Your email address will not be published. Required fields are marked *