ಚೆನ್ನೈ: ವರ್ಷಾನು ವರ್ಷಗಳೇ ಕಳೆದರೂ ಬೆಟ್ಟದಷ್ಟು ಪ್ರಕರಣಗಳು ಕೋರ್ಟಿನಲ್ಲಿಯೇ ಒದ್ದಾಡುತ್ತಿರುತ್ತದೆ. ಹೀಗಿರುವಾಗ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿದ್ದ ವಿಜಯ ತಹಿಲ್ರಮಣಿ ಅವರು ಕೇವಲ ಒಂದು ವರ್ಷದಲ್ಲಿ ಸುಮಾರು 5 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.
ವಿಜಯ ತಹಿಲ್ರಮಣಿ ಅವರು ತಮ್ಮ ಸೇವಾವಧಿ ವೇಳೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ ಎಂದು ತಿಳಿದು ಬಂದಿದ್ದು, ನ್ಯಾಯಾಧೀಶೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೇಶದಲ್ಲಿನ 25 ಹೈ ಕೋರ್ಟ್ಗಳಲ್ಲಿ ಇನ್ನೂ 43 ಲಕ್ಷ ಪ್ರಕರಣಗಳು ಹಾಗೇ ಇತ್ಯರ್ಥಗೊಳ್ಳದೆ ಬಾಕಿ ಉಳಿದಿದೆ. 8 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಶಕಕ್ಕೂ ಹೆಚ್ಚು ಕಾಲದಿಂದ ಕೋರ್ಟಿನಲ್ಲಿಯೇ ನಡೆಯುತ್ತಿದೆ. ಹಾಗೆಯೇ ಜೂನ್ 1ರ ಮಾಹಿತಿ ಪ್ರಕಾರ, ಸುಪ್ರೀಂ ಕೋರ್ಟಿನಲ್ಲೇ ಬರೋಬ್ಬರಿ 1,58,669 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ. ಹೀಗಿರುವಾಗ ವಿಜಯ ತಹಿಲ್ರಮಣಿ ಅವರು 1 ವರ್ಷದಲ್ಲಿ 5 ಸಾವಿರ ಪ್ರಕರಣಕ್ಕೆ ತೀರ್ಪು ಕೊಟ್ಟು ಭೇಷ್ ಎನಿಸಿಕೊಂಡಿದ್ದಾರೆ.
ಮೇಘಾಲಯಕ್ಕೆ ವರ್ಗಾವಣೆಯಾದ ಬಳಿಕ ವಿಜಯ ತಹಿಲ್ರಮಣಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಮೂಲದವರಾದ ವಿಜಯ ಅವರು ಸದ್ಯ ಚೆನ್ನೈ ವಾತಾವರಣ ಚೆನ್ನಾಗಿದೆ. ಇಲ್ಲಿಯೇ ನಾನು ಇರುತ್ತೇನೆ. ಇಲ್ಲಿನ ವಾತಾವರಣ ನನಗೆ ತುಂಬಾ ಹಿಡಿಸಿದೆ. ನನ್ನ ಕುಟುಂಬಕ್ಕೂ ಚೆನ್ನೈ ಇಷ್ಟವಾಗಿದೆ. ಆದ್ದರಿಂದ ಮುಂಬೈಗೆ ಹಿಂತಿರುಗಿ ಹೋಗುವ ಬದಲು ಇಲ್ಲಿಯೇ ಇರುತ್ತೇವೆ ಎಂದಿದ್ದಾರೆ.