ನವದೆಹಲಿ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಫುಟ್ಪಾತ್ನಲ್ಲಿ ಜೀವನ ನಡೆಸುತ್ತಿರುವ ಭಾರತ ತಂಡದ ಮಾಜಿ ಹಾಕಿ ಆಟಗಾರನ ನೆರವಿಗೆ ನಿಂತಿದ್ದಾರೆ.
ಭಾರತದ ಜೂನಿಯರ್ ಹಾಕಿ ತಂಡದಲ್ಲಿ ಆಟವಾಡಿದ ಅಮರ್ಜೀತ್ ಸಿಂಗ್ ದೆಹಲಿಯ ಫುಟ್ಪಾತ್ನಲ್ಲಿ ಜೀವನ ನಡೆಸುತ್ತಿದ್ದಾರೆ. ಇವರು ಫುಟ್ಪಾತ್ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮರ್ಜೀತ್ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಕೇಂದ್ರ ಕೀಡಾ ಸಚಿವ ಕಿರಣ ರಿಜಿಜು ಹಾಗೂ ಬಿಗ್-ಬಿ ಅಮಿತಾಬ್ ಬಚ್ಚನ್ ಸಹಾಯ ಮಾಡಲು ಮುಂದಾಗಿದ್ದಾರೆ.
ಜೂನಿಯರ್ ಹಾಕಿ ತಂಡದಲ್ಲಿ ಆಟವಾಡಿದ ಅಮರ್ಜೀತ್ ಅಥ್ಲೆಟಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ತಮ್ಮ ಉತ್ತಮ ಆಟದಿಂದ ಗುರುತಿಸಿಕೊಂಡಿದ್ದ ಅಮರ್ಜೀತ್ ಅವರು ಹಲವು ವರ್ಷಗಳ ಕಾಲ ಲಂಡನ್ ಹಾಗೂ ಜರ್ಮನಿಯಲ್ಲೂ ಕಳೆದಿದ್ದರು. ಆದರೆ ಈಗ ಅಮರ್ಜೀತ್ ದೆಹಲಿಯ ಪಹಾಡ್ಗಂಜ್ ಏರಿಯಾದ ಫುಟ್ಪಾತ್ನಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅಮರ್ಜೀತ್ ಯಾವಾಗಿನಿಂದ ಈ ಸ್ಥಿತಿಯಲ್ಲಿದ್ದಾರೆ ಇಲ್ಲಿ ವಾಸಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಟ್ವಿಟ್ಟರಿನಲ್ಲಿ ಈ ವಿಷಯ ತಿಳಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಾಜಿ ಆಟಗಾರನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತೇನೆ. ಭಾರತವನ್ನು ಪ್ರತಿನಿಧಿ ಸದ್ಯ ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡುತ್ತೇವೆ. ಇವರ ವಿಳಾಸ ಸಿಕ್ಕರೆ ಖಂಡಿತವಾಗಿ ಸಹಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕಿರಣ್ ರಿಜಿಜು ಅವರ ಮೊದಲು ಬಿಗ್-ಬಿ ಅಮಿತಾಬ್ ಬಚ್ಚನ್ ಮಾಜಿ ಆಟಗಾರನ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ, ಅವರಿಗೆ ಎಲ್ಲಿ ಹಾಗೂ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಯಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.