ಕೋಲಾರ; ಬೆಂಗಳೂರು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೋಲಾರದಲ್ಲಿ (Kolar) ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಚಿನ್ನಪಲ್ಲಿ (Chinnapalli) ಬಳಿ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಮಾಜಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ (Nisarga Narayanswamy) ವಿರುದ್ಧ ಸ್ಥಳಿಯರು ಆರೋಪ ಹೊರಿಸಿದ್ದಾರೆ. ಅಲ್ಲದೆ ಸ್ಥಳೀಯರು ಹಾಗೂ ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ.
ದೇವನಹಳ್ಳಿ ಜೆಡಿಎಸ್ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ದ ಸರ್ಕಾರಿ ಭೂಮಿ ಒತ್ತುವರಿ (Government Land Encroachment) ಆರೋಪ ಇದಾಗಿದೆ. ಚಿನ್ನಪಲ್ಲಿ ಸರ್ವೆ ನಂ-20 ರಲ್ಲಿ ಒಂದಷ್ಟು ಜಮೀನು ಖರೀದಿ ಮಾಡಿರುವ ಅವರು ಪಕ್ಕದಲ್ಲೇ ಇರುವ ಸರ್ವೇ ನಂ.21ರಲ್ಲಿ ಇರುವ ಸರ್ಕಾರಿ ಗೋಮಾಳ ಭೂಮಿ ಮೇಲೂ ಕಣ್ಣು ಹಾಕಿದ್ದಾರೆ. ಸುಮಾರು 76 ಎಕರೆ ಗೋಮಾಳ ಭೂಮಿಯಲ್ಲಿ ಹತ್ತಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಾಪ್ ಕಾರ್ನ್ ಮೇಲೆ 3 ರೀತಿಯ ಜಿಎಸ್ಟಿ – ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ; ಯಾವುದು ದುಬಾರಿ?
ಈಗಾಗಲೆ ಭೂಮಿ ಇಲ್ಲದವರು, ಸ್ಥಳೀಯರು ಬಗರ್ ಹುಕಂ ಕಾಯ್ದೆಯಡಿ ನಮೂನೆ 57ಗೆ ಅರ್ಜಿಗಳನ್ನು ಹಾಕಿಕೊಂಡಿದ್ದಾರೆ. ಆದರೆ ಪ್ರಭಾವ ಬಳಸಿಕೊಂಡು ಮಾಜಿ ಶಾಸಕರು ಸರ್ಕಾರಿ ಗೋಮಾಳ ನುಂಗಲು ಮುಂದಾಗಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಇನ್ನೂ ಸ್ಥಳಕ್ಕೆ ಕೆಜಿಎಫ್ ತಹಶೀಲ್ದಾರ್ ನಾಗವೇಣಿ ಸಹ ಭೇಟಿ ನೀಡಿದ್ದು, ಸ್ಥಳೀಯರಿಂದಲೂ ಮನವಿ ಸ್ವೀಕರಿಸಿದ್ದಾರೆ. ಸದ್ಯ ಒತ್ತುವರಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಒತ್ತುವರಿ ತಿಳಿಯಲಿದೆ ಎಂಬುದು ತಹಶೀಲ್ದಾರ್ ನಾಗವೇಣಿ ಮಾತು. ಅಲ್ಲದೆ ದಾಖಲೆಗಳ ಸಹಿತ ಸರ್ವೆ ಮಾಡಿ ಒತ್ತುವರಿ ಕುರಿತು ಪರಿಶೀಲನೆ ಮಾಡುವ ಭರವಸೆಯನ್ನು ನಾಗವೇಣಿ ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ಸಿ.ಟಿ.ರವಿ ಟೆಂಪಲ್ ರನ್ – ರಾಘವೇಂದ್ರ ಸ್ವಾಮಿ ದೀರ್ಘದಂಡ ನಮಸ್ಕಾರ