ಬೆಂಗಳೂರು: ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
‘ಅರಬ್ಬಿ’ ಚಿತ್ರದ ಮೂಲಕ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅರಬ್ಬಿ ಚಿತ್ರದಲ್ಲಿ ಅಣ್ಣಾಮಲೈ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾರಾ ಈಜುಪಟು ಕೆ.ಎಸ್ ವಿಶ್ವಾಸ್ ಅವರ ಜೀವನಚರಿತ್ರೆ ಇದಾಗಿದ್ದು, ಚಿತ್ರದಲ್ಲಿ ತಮ್ಮ ಪಾತ್ರದಲ್ಲಿ ಸ್ವತಃ ವಿಶ್ವಾಸ್ ಅವರೇ ನಟಿಸಲಿದ್ದಾರೆ. ವಿಶೇಷ ಎಂದರೆ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ವಿಶ್ವಾಸ್ ಅವರಿಗೆ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ರಾವ್ ನಟಿಸಲಿದ್ದಾರೆ.
ಪ್ಯಾರಾ ಸ್ವಿಮ್ಮಿಂಗ್ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವಾಸ್ 10ನೇ ವಯಸ್ಸಿನಲ್ಲಿದ್ದಾಗ ಮನೆಯಲ್ಲಿ ಹೈಟೆನ್ಷನ್ ವೈರ್ ಮೇಲೆ ಬಿದ್ದು ಎರಡು ತಿಂಗಳು ಕೋಮಾಗೆ ಜಾರಿದರು. ಅಲ್ಲದೆ ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ವಿಶ್ವಾಸ್ ಎರಡು ಕೈ ಕಳೆದುಕೊಂಡರೂ ಛಲ ಬಿಡದೆ ಏನಾದರೂ ಸಾಧನೆ ಮಾಡಬೇಕೆಂದು ಪ್ಯಾರಾ ಸ್ವಿಮ್ಮಿಂಗ್ ಕಲಿತರು.
ಪ್ಯಾರಾ ಸ್ವಿಮ್ಮಿಂಗ್ ಕಲಿತ ನಂತರ ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. ಹೀಗಾಗಿ ವಿಶ್ವಾಸ್ ಜೀವನಾಧಾರಿತ ಚಿತ್ರದಲ್ಲಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಚಿತ್ರಕ್ಕೆ ಅಣ್ಣಾಮಲೈ ಅವರು 1 ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಸಂಭಾವನೆ ಪಡೆದ ಬಗ್ಗೆ ಆಗಲಿ ಅಥವಾ ಚಿತ್ರದಲ್ಲಿ ಅಣ್ಣಾಮಲೈ ನಟಿಸುತ್ತಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ.
ಸದ್ಯ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ ನಂತರ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಸದ್ಯಕ್ಕೆ ಅವರು ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.