ಮಂಡ್ಯ: ನಟಿ ಸುಮಲತಾ ಅಂಬರೀಶ್ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಬಿಜೆಪಿ ಮುಖಂಡ ಆರ್. ಅಶೋಕ್ ಇಂದು ಮಂಡ್ಯದಲ್ಲಿ ಸುಮಲತಾರ ನಿಲುವು ತಿಳಿಯಲು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ನಮ್ಮ ಪಕ್ಷಕ್ಕೆ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ. ಯಾರನ್ನೂ ನಾವು ಬಲವಂತ ಮಾಡಲ್ಲ. ಅವರು ನಮ್ಮ ಪಾರ್ಟಿಯಿಂದ ನಿಲ್ಲುತ್ತಾರಾ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರೆಯಾ ಎಂಬ ಗೊಂದಲ ಇದೆ. ಇದು ತೀರ್ಮಾನವಾದ ಮೇಲೆ ನಮ್ಮ ಪಾರ್ಟಿಯ ನಿಲುವನ್ನು ಹೇಳುತ್ತೇವೆ ಎಂದರು.
ಈಗಾಗಲೇ ನಮ್ಮ ನಾಯಕರು ಅವರ ಜೊತೆ ಮಾತನಾಡಲು ಹೇಳಿದ್ದಾರೆ. ಹೀಗಾಗಿ ನಾನು ಅವರ ಜೊತೆ ಮಾತನಾಡುತ್ತಿದ್ದೇನೆ. ನಮ್ಮದು ರಾಷ್ಟ್ರೀಯ ಪಾರ್ಟಿ. ಆದ್ದರಿಂದ ನನಗೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಈಗಾಗಲೇ ನಡೆದಿರುವ ಮಾತುಕತೆಯ ಬಗ್ಗೆ ನಮ್ಮ ನಾಯಕರಿಗೆ ತಿಳಿಸಿದ್ದೇನೆ. ಇಂದು ಮತ್ತೊಮ್ಮೆ ಮಾತುಕತೆ ಮಾಡಿ ಅವರಿಗೆ ಹೇಳುತ್ತೇನೆ. ನಂತರ ಅವರು ಏನು ತೀರ್ಮಾನ ಮಾಡುತ್ತಾರೆ ಅದು ಅಂತಿಮವಾಗುತ್ತದೆ ಎಂದು ಅಶೋಕ್ ಹೇಳಿದ್ದಾರೆ.
ಸುಮಲತಾ ಅವರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೂ ಜೆಡಿಎಸ್ ನಾಯಕರು ಸುಮ್ಮನಿರೋದು ಯಾಕೆ ಎಂಬ ಪ್ರಶ್ನೆ ಮಂಡ್ಯ ಜಿಲ್ಲೆಯಾದ್ಯಂತ ಹುಟ್ಟಿಕೊಂಡಿದೆ. ಕಳೆದ ಒಂದು ತಿಂಗಳಿಂದಲೂ ಸುಮಲತಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ನಿಖಿಲ್ ಕೆಲವು ದಿನಗಳ ಅಂತರದಲ್ಲಿ ಕೇವಲ ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇದನ್ನ ನೋಡಿದರೆ ಸುಮಲತಾಗೆ ಟಾಂಗ್ ಕೊಡಲು ದಳಪತಿಗಳು ಸ್ಪರ್ಧೆಯ ಬಗ್ಗೆ ರೂಪಿಸುತ್ತಿದ್ದಾರೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ಮಂಗಳವಾರ ಮದ್ದೂರಿಗೆ ಭೇಟಿ ನೀಡಿದ್ದ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಸಹ ಮಾಧ್ಯಮಗಳಿಗೆ ಹೇಳಿಕೆ ನೀಡದೆ ವಾಪಸ್ಸಾಗಿದ್ದರು. ಸುಮಲತಾ ಪ್ರಚಾರದ ಶೈಲಿ ಮತ್ತು ಹೇಳಿಕೆಗಳನ್ನ ಜೆಡಿಎಸ್ ನಾಯಕರು ಗಮನಿಸುತ್ತಿದ್ದು, ನಿಧಾನವಾಗಿ ಟಾಂಗ್ ಕೊಡಲು ಅಣಿಯಾಗುತ್ತಿದ್ದಾರೆ ಎಂದು ಜನ ಮಾತನಾಡಿಕೊಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv