ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಯ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಬಿರುಗಾಳಿ ಎದ್ದೇಳುತ್ತಾ ಎಂಬ ಪ್ರಶ್ನೆಯೊಂದು ರಾಜ್ಯ ರಾಜಕೀಯದಲ್ಲಿ ಸುನಾಮಿಯಂತೆ ಹರಿದಾಡುತ್ತಿದೆ. ಈ ಪ್ರಶ್ನೆ ಹುಟ್ಟಲು ಕಾರಣ ಮಾಜಿ ಸಿಎಂ, ಬಿಎಸ್ ಯಡಿಯೂರಪ್ಪರ ಹೇಳಿಕೆ. ಸೋಮವಾರ ಮಾತನಾಡಿದ್ದ ಯಡಿಯೂರಪ್ಪನವರು ನಾಮಪತ್ರ ಸಲ್ಲಿಕೆಯ ಬಳಿಕ ಸಮ್ಮಿಶ್ರ ಸರ್ಕಾರದವರಲ್ಲಿ ಜಗಳ ನಡೆಯುತ್ತೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ.
ಸೋಮವಾರ ಶಿವಮೊಗ್ಗದಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರ ನಾಮಪತ್ರ ಸಲ್ಲಿಸಿ, ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಿದರು. ಈ ಬೆಳವಣಿಗೆಯ ಮಧ್ಯೆಯೇ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅಲ್ಲೋಲ ಕಲ್ಲೋಲವಾಗಲಿದೆ ಅಂತ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ವಿ.ಎಸ್. ಉಗ್ರಪ್ಪ ಅವರನ್ನು ಕಣಕ್ಕೀಳಿಸಲಾಗಿದೆ. ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ಗೆ ಟಿಕೆಟ್ ಸಿಗುವ ಭಾರೀ ನಿರೀಕ್ಷೆ ಇತ್ತು. ಆದರೆ ಇದ್ದಕ್ಕಿದ್ದಂತೆ ಅಭ್ಯರ್ಥಿಯ ಹೆಸರನ್ನು ಬದಲಾವಣೆ ಮಾಡಲಾಯಿತು. ಶಾಸಕರಲ್ಲಿ ಒಮ್ಮತ ಇಲ್ಲದ ಕಾರಣ ಯಾವ ಗುಂಪಿನ ಅಭ್ಯರ್ಥಿಯನ್ನ ನೇಮಕ ಮಾಡಿದ್ರೂ ಪಕ್ಷ ವಿರೋಧಿ ಚಟುವಟಿಕೆ ನಡೆಯುವ ಸಾಧ್ಯತೆ ಇದೆ ಅಂತ ಎಚ್ಚೆತ್ತ ಹೈಕಮಾಂಡ್, ಉಗ್ರಪ್ಪ ಅವರಿಗೆ ಮಣೆ ಹಾಕಿದೆ. ಶಾಸಕ ಶ್ರೀರಾಮುಲು ವಿರುದ್ಧ ವಾಲ್ಮೀಕಿ ಅಸ್ತ್ರವನ್ನೇ ಬಿಡೋ ಪ್ಲಾನ್ ಇದಾಗಿದೆ ಅನ್ನೋ ಮಾತು ಕೇಳಿ ಬಂದಿದೆ.
ಏನದು ಬಾಂಬ್?
ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋದರ ಶಾಸಕ ನಾಗೇಂದ್ರ ಬಂಡಾಯ ಏಳುವ ಸಾಧ್ಯತೆಗಳಿವೆ. ಇದೇ ಅಸಮಾಧಾನವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತಿಸಿದ್ದು, ಮತ್ತೆ ಹಳೆಯ ಎರಡು ನಾಯಕರನ್ನು ಸಂಪರ್ಕಿಸಿ ಪಕ್ಷ ಸೇರುವಂತೆ ಮನವೊಲಿಸುವ ಕಸರತ್ತುಗಳು ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಯಡಿಯೂರಪ್ಪರ ಈ ಪ್ಲಾನ್ ಯಶಸ್ವಿಯಾದಲ್ಲಿ ಉಪ ಚುನಾವಣೆಗೂ ಮೊದಲೇ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ.
ಈಗಾಗಲೇ ಯಡಿಯೂರಪ್ಪರ ಸೂಚನೆ ಮೇರೆಗೆ ಶ್ರೀರಾಮುಲು ಆನಂದ್ ಸಿಂಗ್ ಮತ್ತು ನಾಗೇಂದ್ರರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರಂತೆ. ಒಂದು ವೇಳೆ ಮತ್ತೆ ಆನಂದ್ ಸಿಂಗ್ ಮತ್ತು ನಾಗೇಂದ್ರ ಬಿಜೆಪಿ ಸೇರುತ್ತಾರಾ ಅಥವಾ ಪಕ್ಷದಲ್ಲಿಯೇ ಉಳಿದುಕೊಳ್ಳುತ್ತಾರಾ ಎಂಬುವುದು ತಿಳಿಯಬೇಕಿದೆ.
ಕರ್ನಾಟಕ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಅಭ್ಯರ್ಥಿಗಳ ಹೆಸರು ಘೋಷಣೆ ಬೆನ್ನಲ್ಲೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬಂಡಾಯದ ಬಿಸಿ ತಟ್ಟುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv