ಈ ಒಂದು ಕಾರಣಕ್ಕೆ ಸಿಎಂ ಬಿಎಸ್‍ವೈಯನ್ನು ವಾಲ್ಮೀಕಿ ಜಯಂತಿಗೆ ಆಹ್ವಾನಿಸಿಲ್ಲವಂತೆ!

Public TV
1 Min Read
BSY CM

ಬೆಂಗಳೂರು: ವಾಲ್ಮೀಕಿ ಜಯಂತಿ ಆಚರಣೆ ಜಾರಿಗೆ ತಂದಿದ್ದು ನಾವು ಆದರೆ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನನ್ನನ್ನೇ ಆಹ್ವಾನಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಾವು ವಾಲ್ಮೀಕಿ ಜಯಂತಿ ಆಚರಣೆ ಜಾರಿಗೆ ತಂದು ಸರ್ಕಾರಿ ರಜೆ ಘೋಷಿಸಿದ್ದೇವೆ. ಆದರೆ ಇಂದು ಶಾಸಕರ ಭವನದ ಆವರಣದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ನಾನು ಸಮಾರಂಭಕ್ಕೆ ಬಂದ್ರೆ ಜನ ಜಯಘೋಷ ಹಾಕಲಿದ್ದಾರೆ ಎನ್ನುವ ಭಯದಿಂದ ನನ್ನನ್ನು ಆಹ್ವಾನಿಸಿಲ್ಲ ಎಂದು ಸಿದ್ದರಾಮಯ್ಯನವರ ವಿರುದ್ಧ ದೂರಿದರು.

ಐಟಿ ಅಧಿಕಾರಿಗಳು ಭಯ ಬೀಳಬೇಕಿಲ್ಲ, ಎಸಿಬಿ ಮೂಲಕ ಎಲ್ಲರನ್ನೂ ಭಯ ಬೀಳಿಸುವ ಕೆಲಸಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಎಸಿಬಿ ಸಿದ್ದರಾಮಯ್ಯನವರ ರಕ್ಷಣಾ ದಳ. ಅದು ಸಿಎಂ, ಜಾರ್ಜ್ ಸೇರಿದಂತೆ ಇತರರ ಭ್ರಷ್ಟಾಚಾರದ ರಕ್ಷಣೆಗೆ ನಿಂತಿದೆ. ಎಸಿಬಿ ಭ್ರಷ್ಟಾಚಾರ ತಡೆಯುವ ದಳ ಅಲ್ಲ, ಲೂಟಿಯ ರಕ್ಷಣೆಗೆ ಇರುವ ದಳ. ಎಸಿಬಿ ಅಸ್ತ್ರ ಪ್ರಯೋಗಕ್ಕೆ ಐಟಿ ಅಧಿಕಾರಿಗಳು ಬಗ್ಗುವುದಿಲ್ಲ. ಅಧಿಕಾರಿಗಳ ಜತೆ ನಾವು ಇರುತ್ತೇವೆ. ಇವೆಲ್ಲವನ್ನೂ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆಂದು ಸಿದ್ದರಾಮಯ್ಯ ವಿರುದ್ಧ ಬಿಎಸ್‍ವೈ ಕೆಂಡಕಾರಿದರು.

ಮೂರು ದಿವಸಕ್ಕೊಮ್ಮೆ ಒಂದೊಂದು ಹಗರಣ ಬಯಲಿಗೆ ಎಳೆಯುತ್ತೇವೆ. ಶೀಘ್ರದಲ್ಲೇ ಬಿಜೆ ಪುಟ್ಟಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಹಗರಣವೊಂದನ್ನ ಬಯಲಿಗೆಳೆಯಲಿದ್ದಾರೆ ಎಂದು ಬಿಎಸ್‍ವೈ ತಿಳಿಸಿದರು.

ಸಿಎಂ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ರೈತರಿಗೆ ಹಣ ಬಿಡುಗಡೆ ಆಗಿಲ್ಲ ಅಂತ ಸ್ವತಃ ಕಾಗೋಡು ತಿಮ್ಮಪ್ಪನವರೇ ಹೇಳಿದ್ದಾರೆ. ಸಾಲಮನ್ನಾ ಮಾಡಿ 100 ದಿನ ಆದರೂ ರೈತರ ಸಾಲದ ಹಣ ಸಹಕಾರಿ ಬ್ಯಾಂಕ್‍ಗಳಿಗೆ ತಲುಪಿಲ್ಲ. ಅದಕ್ಕೆ ಸಹಕಾರಿ ಸಂಘಗಳು ಬೀದಿಗೆ ಬರುವಂತೆ ಆಗಿದೆ. ರೈತರಿಗೆ ಮತ್ತೆ ಸಾಲ ಕೊಡುತ್ತಿಲ್ಲ, ಇದರಿಂದ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಸಾಲಮನ್ನಾ ಅಂತ ಸಿಎಂ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ರೈತರಿಗೆ ಬಿಡಿಗಾಸು ಹೋಗಿಲ್ಲ. ತಕ್ಷಣ ಸಿಎಂ ರೈತರ ಖಾತೆಗೆ ಹಣ ಬಿಡುಗಡೆ ಮಾಡಬೇಕು ಎಂದು ಬಿಎಸ್‍ವೈ ಆಗ್ರಹಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *