ಕೋಲಾರ: ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆಗಳಿಂದ ದೂರವಿದ್ದು, ಅಷ್ಟೊಂದು ಸಕ್ರಿಯನಾಗಿಲ್ಲ. ಹೀಗಾಗಿ ಎಲ್ಲ ಆಗುಹೋಗುಗಳನ್ನು ದೂರದಿಂದಲೇ ನೋಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹೇಳಿದ್ದಾರೆ.
ನಗರದಲ್ಲಿಂದು ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪನವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿದ್ದ ಅವರು, ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ನನ್ನ ಕೈ ನೋಡುವುದಕ್ಕೆ ಬರುವುದಿಲ್ಲ. ಇನ್ನು ಸಮ್ಮಿಶ್ರ ಸರ್ಕಾರದ ಭವಿಷ್ಯ ನನಗೆ ಗೊತ್ತಿಲ್ಲ. ರಾಜಕಾರಣದಲ್ಲಿ ನಾನು ಅಷ್ಟು ಸಕ್ರಿಯವಾಗಿಲ್ಲ, ದೂರದಿಂದ ನೋಡುತ್ತಿದ್ದೇನೆ ಅಂದ್ರು.
ನನಗೆ ಕಮಲ ಮಾತ್ರ ಗೊತ್ತು ಆಪರೇಷನ್ ಗೊತ್ತಿಲ್ಲ. ಮಂಡ್ಯದಲ್ಲಿ ಚುನಾವಣೆಯ ಅಭ್ಯರ್ಥಿಯನ್ನ ಅಲ್ಲಿನ ಬಿಜೆಪಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ ಅವರು ಸುಮಲತಾ ಅಭ್ಯರ್ಥಿ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಬಹಳ ಸಮರ್ಪಕವಾದ ಬಜೆಟ್ ಕೊಟ್ಟಿದೆ. ಈ ಬಜೆಟ್ ಎಲ್ಲಾ ವರ್ಗಗಳ ಜನರ ಅನಿಸಿಕೆಗಳಿಗೆ ಸ್ಪಂದಿಸುವಂತದ್ದಾಗಿದೆ ಎಂದು ಅವರು ಮೋದಿ ಸರ್ಕಾರ ಮಂಡಿಸಿದ ಕೊನೆಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದಿಗ್ಗಜರ ಸಮಾಗಮ:
ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಂ.ವಿ.ಕೃಷ್ಣಪ್ಪ ಅವರು ಕೃಷಿ ಜೊತೆಗೆ ಹೈನೋದ್ಯಮ ಪರಿಚಯಿಸಿದ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದಾರೆ. ಹೊರ ದೇಶದ ತಳಿಯ ಹಸುಗಳನ್ನ ತಂದು ಹಾಲಿನ ಹೊಳೆ ಹರಿಸಿದ ಮಹಾನ್ ಚೇತನ ಕೂಡ ಆಗಿದ್ದರು. ಹೀಗಾಗಿ ಇವರ ಜನ್ಮ ಶತಮಾನೋತ್ಸವವನ್ನು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ನಿಂದ ಅದ್ಧೂರಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಗಳಿಂದ 30 ಸಾವಿರ ಜನ ರೈತರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸಚಿವರಾದ ಕೃಷ್ಣ ಬೈರೇಗೌಡ ಎಲ್ಲರೂ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಸ್ ಎಂ ಕೃಷ್ಣ ಅವರು ಕೋಲಾರದ ಪ್ರವಾಸಿ ಮಂದಿರದಲ್ಲಿ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv