– ಯಾವ ಏರ್ ಪೋರ್ಟಿನಿಂದ್ಲೂ ಹೋಗುವಂಗಿಲ್ಲ
– ಕಾರು, ರೈಲಿನಲ್ಲೂ ಮಂಗ್ಳೂರು ಹೋಗುವಂತಿಲ್ಲ
ಬೆಂಗಳೂರು: ಮಂಗಳೂರು ಹೋಗದಂತೆ ಅಲ್ಲಿಯ ಪೊಲೀಸ್ ಕಮಿಷನರ್ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ಮಂಗಳೂರಿಗೆ ಹೋಗಬೇಕು ಅಂತ ತೀರ್ಮಾನ ಮಾಡಿದ್ದು, ಹಾಗೆಯೇ ಮಧ್ಯಾಹ್ನ 2 ಗಂಟೆಗೆ ಹೋಗಬೇಕಾಗಿತ್ತು. ಆದರೆ ಮಂಗಳೂರು ಏರ್ ಪೋರ್ಟಿನಲ್ಲಿ ನಮ್ಮ ವಿಮಾನಕ್ಕೆ ಇಳಿಯಲು ಅನುಮತಿ ಕೊಡಬಾರದೆಂದು ಏರ್ ಪೋರ್ಟಿಗೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅಲ್ಲಿ ಲ್ಯಾಂಡ್ ಆಗಲು ನಮಗೆ ಅನುಮತಿ ಕೊಡಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಲ್ಲಿ ಇಬ್ಬರು ಗೋಲಿಬಾರಗ ಗೆ ಬಲಿಯಾಗಿದ್ದಾರೆ. ಅವರ ಮನೆಗೆ ಸಾಂತ್ವಾನ ಹೇಳಲು ಹಾಗೂ ಘಟನೆ ಬಗ್ಗೆ ವಿವರ ತಿಳಿದುಕೊಳ್ಳಲು ಹೋಗುತ್ತಿದ್ದೆವು ಹೊರತು ಶಾಂತಿ ಭಂಗ ಮಾಡಲು ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಒಂದು ವಿಡಿಯೋದಲ್ಲಿ ಪೊಲೀಸ್ ಹೇಳುತ್ತಾನೆ. ಏನ್ರಿ ಗೋಲಿಬಾರ್ ಆಗಿಯೂ ಯಾರು ಸತ್ತಿಲ್ವಾ ಅಂತ. ಇದರಿಂದ ಸರ್ಕಾರವೇ ಗೋಲಿಬಾರ್ ಗೆ ಕುಮ್ಮಕ್ಕು ಕೊಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಇಬ್ಬರನ್ನು ಅವರು ಉದ್ದೇಶಪೂರ್ವಕವಾಗಿಯೇ ಕೊಂದಿದ್ದಾರೆ. ಅಲ್ಲದೆ ಅವರ್ಯಾರೂ ಹಿಂಸಾಚಾರದಲ್ಲಿ ತೊಡಗಿದವರೇ ಅಲ್ಲ. ಸೆಕ್ಷನ್ 144 ಇದ್ದರೆ ಪ್ರತಿಭಟನೆ ಮಾಡಬಾರದು ಎಂದು ಯಾವ ಕೋರ್ಟಿನಲ್ಲೂ ಹೇಳಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಪೊಲೀಸ್ ನೊಟೀಸ್
200-300 ಜನ ಪ್ರತಿಭಟನೆ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಬಹುದಿತ್ತು. ಆದರೆ ಗೋಲಿಬಾರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಅಂತ ಪರಿಸ್ಥಿತಿಯೂ ಅಲ್ಲಿ ಇರಲಿಲ್ಲ. ಇದೀಗ ಸರ್ಕಾರದ ವೈಫಲ್ಯ ಹಾಗೂ ಪೊಲೀಸರ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನಾನು ಮಂಗಳೂರು ಹೋಗುವುದನ್ನು ತಡೆಹಿಡಿದಿದ್ದಾರೆ. ಇಂದು ಮುಖ್ಯಮಂತ್ರಿ, ಬಸವರಾಜ್ ಬೊಮ್ಮಾಯಿ, ಕಾರಜೋಳ ಎಲ್ಲ ಯಾಕೆ ಅಲ್ಲಿಗೆ ಹೋದರು. ಮುಖ್ಯಮಂತ್ರಿಗೆ ತೆರಳಲು ಅವಕಾಶವಿದೆ. ಆದರೆ ವಿರೋಧ ಪಕ್ಷದವರಿಗೆ ಅನುಮತಿ ಇಲ್ಲ ಎಂದು ಗರಂ ಆದರು.
ಮಂಗಳೂರು ನಗರ ಪೊಲೀಸ್ ಆಯುಕ್ತರು ನನಗೊಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ನಾಳೆ ರಾತ್ರಿ 12 ಗಂಟೆಯವರೆಗೆ ಮಂಗಳೂರು ವ್ಯಾಪ್ತಿ ಪ್ರವೇಶಿಸುವ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಬರೆಯಲಾಗಿದೆ. ಅಲ್ಲದೆ ಹುಬ್ಬಳ್ಳಿ, ಮೈಸೂರು, ಗೋವಾ ಹಾಗೂ ಬೆಂಗಳೂರು ಹೀಗೆ ಯಾವ ಏರ್ ಪೋರ್ಟಿನಿಂದಲೂ ನನಗೆ ಹೋಗುವ ಅವಕಾಶವಿಲ್ಲ. ಇಷ್ಟು ಮಾತ್ರವಲ್ಲದೆ ರೈಲು ಹಾಗೂ ಕಾರಿನಲ್ಲಿಯೂ ಹೋಗುವಂತಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.
ಇದರಿಂದ ಈ ರಾಜ್ಯ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಹೀಗಿದ್ದಲ್ಲಿ ವಿರೋಧ ಪಕ್ಷಗಳು ಯಾಕಿರಬೇಕು. ನೊಂದವರ ದನಿಯಾಗಿ ಕೆಲಸ ಮಾಡಲು, ಅನ್ಯಾಯ ಆಗಿದ್ದರೆ ಅನ್ಯಾಯ ಆಗಿದೆ ಎಂದು ತಿಳಿಸಲು, ಸರ್ಕಾರ ತಪ್ಪು ಮಾಡಿದ್ರೆ ಅದನ್ನು ಎತ್ತಿ ತೋರಿಸಲು ವಿರೋಧ ಪಕ್ಷಗಳಿರುವುದು. ಅದೇ ಪ್ರಜಾಪ್ರಭುತ್ವ. ಆದರೆ ಈ ರೀತಿ ಯಾವತ್ತೂ ಆಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.